ದೇಶ

ಮುಂಬೈ: ನೌಕಾಪಡೆಯ ಭೂ ಸ್ವಾಧೀನಕ್ಕೆ ಆಕ್ರೋಶ; ರೈತರಿಂದ ಪ್ರತಿಭಟನೆ, ವಾಹನಗಳಿಗೆ ಬೆಂಕಿ!

Srinivasamurthy VN

ಮುಂಬೈ: ಮಹಾರಾಷ್ಟ್ರದಲ್ಲಿ ಮತ್ತೆ ರೈತರ ಪ್ರತಿಭಟನೆ ಭುಗಿಲೆದ್ದಿದ್ದು, ನೌಕಾಸೇನೆಯ ಭೂಸ್ವಾಧೀನಕ್ಕೆ ಆಕ್ರೋಶ ವ್ಯಕ್ತಪಡಿಸಿ ರೈತರು ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ಮುಂಬೈನ ಥಾಣೆ-ಬದ್ಲಾಪುರ ಹೆದ್ದಾರಿಯಲ್ಲಿ ನಡೆದಿದೆ.

ಮೂಲಗಳ ಪ್ರಕಾರ ಭಾರತೀಯ ನೌಕಾಪಡೆ ಸುಮಾರು 17 ಗ್ರಾಮಗಳ ರೈತರ ನೂರಾರು ಎಕರೆ ಕೃಷಿ ಭೂಮಿಯನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಿ ನೂರಾರು ರೈತರು ಹೆದ್ದಾರಿ ತಡೆ ನಡೆಸಿದ್ದಾರೆ. ಈ  ವೇಳೆ ಕೆಲ ಆಕ್ರೋಶಿತ ರೈತರು ಹೆದ್ದಾರಿಯಲ್ಲಿದ್ದ ವಾಹನಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗಲಭೆ ನಿಯಂತ್ರಣಕ್ಕೆ ಪೊಲೀಸರು  ಹರಸಾಹಸ ಪಡುತ್ತಿದ್ದಾರೆ.

ಇನ್ನು ರೈತರ ಗಲಭೆ ನಿಯಂತ್ರಣಕ್ಕಾಗಿ ತುರ್ತು ಪ್ರಹಾರ ದಳ ಹಾಗೂ ಕೇಂದ್ರೀಯ ಪಡೆಗಳಿಗೆ ಬುಲಾವ್ ನೀಡಲಾಗಿದ್ದು, ಶೀಘ್ರದಲ್ಲೇ ತುರ್ತು ಪ್ರಹಾರ ದಳ ಹಾಗೂ ಕೇಂದ್ರೀಯ ಪಡೆಗಳು ರಕ್ಷಣೆ ನಿಯೋಜನೆಯಾಗಲಿವೆ ಎಂದು  ತಿಳಿದುಬಂದಿದೆ.

SCROLL FOR NEXT