ಪುಣೆ: ಈ ಸುದ್ದಿ ಓದಿದರೆ ಎಂಥ ಕಲ್ಲು ಹೃದಯದವರ ಮನಸ್ಸು ಕೂಡ ಕರಗಬಹುದು. ನಾಯಕ್ ಸಂದೀಪ್ ಜಾದವ್ ಕುಟುಂಬಕ್ಕೆ ಸಂಭ್ರಮಾಚರಣೆಯ ಈ ದಿನ ದುಃಖದ ದಿನವಾಗಿ ಮಾರ್ಪಟ್ಟಿದೆ.
ಜಮ್ಮು-ಕಾಶ್ಮೀರದಲ್ಲಿ ನಿನ್ನೆ ಹುತಾತ್ಮರಾದ ಇಬ್ಬರು ಸೈನಿಕರಲ್ಲಿ ಒಬ್ಬರು ಸಂದೀಪ್ ಜಾಧವ್. ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನೆರವೇರಿತು. ಆದರೆ ದುರಂತವೆಂದರೆ ಇಂದು ಅವರ ಪುತ್ರ ಶಿವಮ್ ನ ಮೊದಲ ವರ್ಷದ ಹುಟ್ಟಿದ ದಿನ.
ಹುಟ್ಟುಹಬ್ಬವೆಂದು ಕಿಲಕಿಲ ನಗುತ್ತಾ, ಹೊಸ ಬಟ್ಟೆ ತೊಟ್ಟು ಮನೆಯಿಡೀ ಓಡಾಡುವ ಬದಲು ತನ್ನ ತಂದೆಯ ಅಂತಿಮ ವಿಧಿ ವಿಧಾನ ಕಾರ್ಯದಲ್ಲಿ ಆ ಪುಟ್ಟ ಮಗುವಿಗೆ ಭಾಗವಹಿಸಬೇಕಾಗುವ ದುರ್ದೈವ. ಮಹಾರಾಷ್ಟ್ರದಿಂದ 230 ಕಿಲೋ ಮೀಟರ್ ದೂರದಲ್ಲಿ ಸಿಲ್ಲೊದ್ ತಾಲ್ಲೂಕಿನ ಕೆಲ್ಗೌನ್ ಗ್ರಾಮದಲ್ಲಿ ಸಕಲ ಮಿಲಿಟರಿ ಗೌರವಗಳೊಂದಿಗೆ ನಾಯಕ್ ಸಂದೀಪ್ ಜಾಧವ್ ಅವರ ಅಂತಿಮ ಕಾರ್ಯ ನೆರವೇರಿತು.
15 ಮರಾಠ ಲೈಟ್ ಇನ್ಫಾಂಟ್ರಿಗೆ ಸೇರಿದ 34 ವರ್ಷದ ಜವಾನ ಸಂದೀಪ್ ಜಾದವ್ ಪಾಕಿಸ್ತಾನ ವಿಶೇಷ ಪಡೆ ನಡೆಸಿದ ದಾಳಿಯಲ್ಲಿ ಹುತಾತ್ಮರಾಗಿದ್ದರು. ಪಾಕಿಸ್ತಾನ ಪಡೆ ಎರಡು ದಿನಗಳ ಹಿಂದೆ ಪೂಂಚ್ ವಲಯದ ಗಡಿ ನಿಯಂತ್ರಣ ರೇಖೆ ಬಳಿ 600 ಮೀಟರ್ ಒಳನುಸುಳಿ ಬಂದು ಸೈನಿಕರ ಮೇಲೆ ದಾಳಿ ನಡೆಸಿತ್ತು.
ಈ ದಾಳಿಯಲ್ಲಿ ಕೊಲ್ಹಾಪುರದ 24 ವರ್ಷದ ಸಿಪಾಯಿ ಶ್ರಾವಣ್ ಮಾನೆ ಕೂಡ ಹುತಾತ್ಮರಾಗಿದ್ದಾರೆ.
ಇಂದು ನಡೆದ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಮಂದಿ ಭಾರವಾದ ಹೃದಯದಿಂದ ಭಾಗವಹಿಸಿ ಯೋಧನಿಗೆ ಅಂತಿಮ ವಿದಾಯ ಹೇಳಿದರು.
ತಮ್ಮ ಪುತ್ರನ ಮೊದಲ ಹುಟ್ಟುಹಬ್ಬಕ್ಕೆ ಮನೆಗೆ ಬರುವುದಾಗಿ ಶಿವಮ್ ಮನೆಯವರಿಗೆ ಮಾತು ಕೊಟ್ಟಿದ್ದರಂತೆ. ಆದರೆ ಅವರು ಮರಳಿದ್ದು ಶವಪೆಟ್ಟಿಗೆಯ ಜೊತೆಗೆ. ಅವರ ಕುಟುಂಬಿಕರು ಮತ್ತು ಸ್ನೇಹಿತರು ತೀವ್ರ ಆಘಾತಕ್ಕೊಳಗಾಗಿದ್ದಾರೆ.
ಜಾಧವ್ ಗೆ ಒಂದು ವರ್ಷದ ಪುತ್ರ ಶಿವಮ್, ಮೂರು ವರ್ಷದ ಮಗಳು, ಪತ್ನಿ, ಸೋದರ ಮತ್ತು ಪೋಷಕರಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos