ದೇಶ

ಒಡಿಶಾ: ಪುರಿ ಜಗನ್ನಾಥ ರಥ ಯಾತ್ರೆ ಆರಂಭ, ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು

Sumana Upadhyaya
ಭುವನೇಶ್ವರ್: ವಿಶ್ವವಿಖ್ಯಾತ ಪುರಿ ಜಗನ್ನಾಥ ದೇವಾಲಯದ ವಾರ್ಷಿಕ ರಥ ಯಾತ್ರೆ ಆರಂಭಗೊಂಡಿದ್ದು ಸಾಗರೋಪಾದಿಯಲ್ಲಿ ಜನರು ಬರುತ್ತಿದ್ದಾರೆ.
ಜಗನ್ನಾಥ ದೇವರು, ಬಾಲಭದ್ರ ಮತ್ತು ದೇವಿ ಸುಭದ್ರಾ ಮೂರ್ತಿಯನ್ನು ಮೂರು ಮರದ ರಥದಲ್ಲಿ ಭಕ್ತರು ಎಳೆಯುವುದನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಜಗನ್ನಾಥ ದೇವಳದ ಆವರಣದಲ್ಲಿ ನೆರೆದಿದ್ದಾರೆ.
12ನೇ ಶತಮಾನದ ಜಗನ್ನಾಥ ದೇವಾಲಯದ ಮೂರು ಮೂರ್ತಿಗಳನ್ನು ರಥದಲ್ಲಿ ಕುಳ್ಳಿರಿಸಿ ದೇವಿ ಗುಂಡಿಚಕ್ಕೆ ಕರೆದೊಯ್ಯುವ ವಾರ್ಷಿಕ ಯಾತ್ರೆಯೇ ವಿಶ್ವವಿಖ್ಯಾತ ಪುರಿ ಜಗನ್ನಾಥ ಯಾತ್ರೆ. 9 ದಿನಗಳ ನಂತರ ಬಹುದ ಯಾತ್ರೆ ಅಥವಾ ಮೂರು ಮೂರ್ತಿಗಳನ್ನು ದೇವಸ್ಥಾನಕ್ಕೆ ಹಿಂತಿರುಗಿ ತರುವ ಮೂಲಕ ಜಾತ್ರೆ ಕೊನೆಗೊಳ್ಳುತ್ತದೆ.
ಜಾತ್ರೆಗೆ ಸಂಬಂಧಪಟ್ಟ ಸಂಪ್ರದಾಯಗಳು ಇಂದು ಬೆಳಗ್ಗೆಯಿಂದಲೇ ಆರಂಭಗೊಂಡವು. ಮೂರ್ತಿಗಳ ಪಹಂಡಿ ಬೆಳಗ್ಗೆ 10.30ಕ್ಕೆ ಆರಂಭಗೊಂಡಿತು. ಸುದರ್ಶನ ದೇವರ ಜೊತೆಗೆ ಮೂರು ದೇವರ ಮೂರ್ತಿಗಳನ್ನು ಸಕಲ ವಾದ್ಯಗಳನ್ನು ನುಡಿಸುವ ಮೂಲಕ ದೇವಸ್ಥಾನದ ಎದುರಿನಿಂದ ಮೆರವಣಿಗೆ ಹೊರಡಲಾಯಿತು. 
ಮೂರ್ತಿಗಳನ್ನು ಆಯಾ ರಥಗಳಲ್ಲಿ ಇರಿಸಿದ ನಂತರ ಪುರಿ ರಾಜ ಗಜಪತಿ ದಿವ್ಯಸಿಂಗ್ ದೇವ್ ಚೇರಾ ಪನ್ಹರಾವನ್ನು ನಡೆಸುತ್ತಾರೆ. ನಂತರ ರಥವನ್ನು ಎಳೆಯಲಾಗುತ್ತದೆ ಎಂದು ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ ಮುಖ್ಯಸ್ಥ ಪ್ರದೀಪ್ ಜೆನಾ ತಿಳಿಸಿದ್ದಾರೆ.
ಜಾತ್ರೆಯ ಮತ್ತೊಂದು ಮಹತ್ವವೆಂದರೆ ಎಲ್ಲಾ ಧರ್ಮಗಳ ಜನರು ಮೂರು ಕಿಲೋ ಮೀಟರ್ ಉದ್ದದವರೆಗೆ ನಡೆಯವ ರಥ ಎಳೆಯುವ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಹಿಂದೂಗಳ ಹೊರತಾಗಿ ಇತರ ಧರ್ಮಗಳ ಜನರನ್ನು ಇತರ ದಿನಗಳಲ್ಲಿ ದೇವಸ್ಥಾನದ ಒಳಗೆ ಪ್ರವೇಶಿಸಲು ಬಿಡುವುದಿಲ್ಲ. 
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಅಮಿತ್ ಶಾ ಮತ್ತು ಹಲವು ರಾಜ್ಯ ಮತ್ತು ಕೇಂದ್ರ ಸಚಿವರು ಪುರಿ ರಥ ಯಾತ್ರೆ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ.
ಜಾತ್ರೆ ಸುಗಮವಾಗಿ ಸಾಗಲು ನೂರಾರು ಪೊಲೀಸ್ ಸಿಬ್ಬಂದಿಯನ್ನು ಹಲವು ಭಾಗಗಳಲ್ಲಿ ನಿಯೋಜಿಸಲಾಗಿದೆ. ರಥ ಯಾತ್ರೆಗೆ ಸಕಲ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಕೆ.ಬಿ.ಸಿಂಗ್ ತಿಳಿಸಿದ್ದಾರೆ.
SCROLL FOR NEXT