ಅಜ್ಮೀರ್ ದರ್ಗಾ ಸ್ಫೋಟ ಪ್ರಕರಣದ ತೀರ್ಪು: ಸ್ವಾಮಿ ಅಸೀಮಾನಂದ ಖುಲಾಸೆ
ನವದೆಹಲಿ: 2007 ರಲ್ಲಿ ನಡೆದಿದ್ದ ಅಜ್ಮೀರ್ ದರ್ಗಾದಲ್ಲಿನ ಸ್ಫೋಟ ಪ್ರಕರಣದ ತೀರ್ಪು ಪ್ರಕಟಿಸಿರುವ ಎನ್ಐಎ ವಿಶೇಷ ನ್ಯಾಯಾಲಯ ಪ್ರಮುಖ ಆರೋಪಿ ಸ್ವಾಮಿ ಅಸೀಮಾನಂದ ಅವರನ್ನು ನಿರ್ದೋಷಿ ಎಂದು ಹೇಳಿದ್ದು, ಸುನಿಲ್ ಜೋಷಿ(ಮೃತ), ದೇವೇಂದ್ರ ಗುಪ್ತ, ಭವೇಶ್ ಪಟೇಲ್ ಅವರನ್ನು ಅಪರಾಧಿಗಳೆಂದು ಘೋಷಿಸಿದೆ.
ಸ್ವಾಮಿ ಅಸೀಮಾನಂದ ಅವರೊಂದಿಗೆ ಮತ್ತಿಬ್ಬರು ಆರೋಪಿಗಳನ್ನು ಎನ್ಐಎ ವಿಶೇಷ ನ್ಯಾಯಾಲಯ ನಿರ್ದೋಷಿಗಳೆಂದು ಹೇಳಿದ್ದು, ಅಪರಾಧಿಗಳೆಂದು ಘೋಷಿಸಲಾಗಿರುವ ಮೂವರ ಪೈಕಿ ಸುನಿಲ್ ಜೋಷಿ ಈಗಾಗಲೇ ಮೃತಪಟ್ಟಿದ್ದಾನೆ. ಪ್ರಕರಣದ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಮಾ.16 ಕ್ಕೆ ಪ್ರಕಟಿಸಲಿರುವ ನ್ಯಾಯಾಲಯ, ಭವೇಶ್ ಪಟೇಲ್ ಹಾಗೂ ದೇವೇಂದ್ರ ಗುಪ್ತಗೆ ತಲಾ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಸಲ್ಲಿಕೆಯಾಗಿದ್ದ ವಿವರಗಳನ್ನು ಪರಿಶೀಲಿಸಲು ಕಾಲಾವಕಾಶ ಅಗತ್ಯವಿದ್ದ ಹಿನ್ನೆಲೆಯಲ್ಲಿ, ವಾದ-ಪ್ರತಿವಾದಗಳನ್ನು ಆಲಿಸಿದ್ದ ಎನ್ಐಎ ನ್ಯಾ. ದಿನೇಶ್ ಗುಪ್ತಾ ಫೆಬ್ರವರಿಯಲ್ಲಿ ಪ್ರಕರಣದ ವಿಚಾರಣೆಯನ್ನು ಮುಂದೂಡಿದ್ದರು. ಎನ್ಐಎ ತನಿಖೆಗೂ ಮುನ್ನ ಪ್ರಕರಣವನ್ನು ರಾಜಸ್ಥಾನದ ಭಯೋತ್ಪಾದಕ ನಿಗ್ರಹ ದಳ ತನಿಖೆ ನಡೆಸಿತ್ತು.
2007 ರ ಅಕ್ಟೋಬರ್ 11 ರಂದು ರಂಜಾನ್ ಆಚರಣೆ ವೇಳೆ ಅಜ್ಮೀರ್ ದರ್ಗಾದಲ್ಲಿ ಸ್ಫೋಟ ಸಂಭವಿಸಿ 17 ಜನರು ಗಾಯಗೊಂಡಿದ್ದರೆ, ಮೂವರು ಸಾವನ್ನಪ್ಪಿದ್ದರು. ಪ್ರಕರಣದ ಸಂಬಂಧ ಸುಮಾರು 149 ಸಾಕ್ಷ್ಯಗಳನ್ನು ಆಲಿಸಿ ಹಾಗೂ 451 ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದ್ದು ಎನ್ಐಎ 3 ಪೂರಕ ಚಾರ್ಜ್ ಶೀಟ್ ಗಳನ್ನು ದಾಖಲಿಸಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos