ನವದೆಹಲಿ: ಸುಕ್ಮಾ ನಕ್ಸಲರ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಶುಕ್ರವಾರ ಕೊಂಡಾಡಿದ್ದಾರೆ.
ಹುತಾತ್ಮ ಯೋಧರಿಗೆ ಅಕ್ಷಯ್ ನೆರವು ನೀಡಿರುವ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಜನಾಥ ಸಿಂಗ್ ಅವರು, ಅಕ್ಷಯ್ ಕುಮಾರ್ ಅವರ ಔದಾರ್ಯತೆಯನ್ನು ಪ್ರಶಂಸಿಸಬೇಕು. ಅಕ್ಷಯ್ ಅವರಲ್ಲಿ ಯೋಧರ ಬಗ್ಗೆ ಇರುವ ಭಾವನೆಗಳು ಇತರೆ ಜನರೂ ಕೂಡ ಹುತಾತ್ಮ ಯೋಧರ ಕುಟುಂಬಗಳ ನೆರವು ನೀಡಲು ಸ್ಫೂರ್ತಿಯಾಗಲಿದೆ ಎಂದು ಹೇಳಿದ್ದಾರೆ.
ಇದರಂತೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕೂಡ ಅಕ್ಷಯ್ ಕುಮಾರ್ ಅವರನ್ನು ಪ್ರಶಂಸಿಸಿದ್ದು, ಸುಕ್ಮಾ ದಾಳಿಯಲ್ಲಿ 12 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದರು. ಹುತಾತ್ಮರಾದ ಪ್ರತೀ ಯೋಧರ ಕುಟುಂಬಗಳಿಗೂ ನಟ ಅಕ್ಷಯ್ ಕುಮಾರ್ ಅವರು ರೂ.9 ಲಕ್ಷ ನೆರವು ನೀಡಿದ್ದಾರೆ. ಯೋಧರ ಬಗ್ಗೆ ಅವರಿಗುವ ಭಾವನೆ ಹಾಗೂ ಸ್ಪಂದನೆಗಳನ್ನು ಪ್ರಶಂಸಿಸಬೇಕೆಂದು ತಿಳಿಸಿದ್ದಾರೆ.