ದೇಶ

ತ್ರಿಪುರಾದಲ್ಲಿ ಬೆಂಗಳೂರು ಐಐಎಸ್ ಸಿ ದಾಳಿ ಸಂಚುಕೋರ ಉಗ್ರನ ಬಂಧನ

Srinivasamurthy VN

ತ್ರಿಪುರಾ: 2005ರ ಐಐಎಸ್ ಸಿ ಕೇಂದ್ರ ಮೇಲೆ ನಡೆದಿದ್ದ ಭೀಕರ ಉಗ್ರ ದಾಳಿ ಪ್ರಕರಣ ಸಂಬಂಧ ಉಗ್ರ ನಿಗ್ರಹ ದಳದ ಅಧಿಕಾರಿಗಳು ಓರ್ವ ಲಷ್ಕರ್ ಉಗ್ರನನ್ನು ಶುಕ್ರವಾರ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಬರೋಬ್ಬರಿ 12 ವರ್ಷಗಳ ಹಿಂದೆ ದೇಶಾದ್ಯಂತ ಸಂಚಲನ ಮೂಡಿಸಿದ್ದ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಸಿ) ಮೇಲಿನ ಉಗ್ರ ದಾಳಿಗೆ ಸಂಬಂಧಿಸಿದ ಶಂಕಿತ ಲಷ್ಕರ್‌ ಉಗ್ರ ಸಬಾವುದ್ದೀನ್‌ ಗಡಿ ದಾಟಿ  ಬಾಂಗ್ಲಾದೇಶಕ್ಕೆ ನುಸುಳಲು ನೆರವಾಗಿದ್ದ ಎನ್ನಲಾದ ಅಗರ್ತಲ ನಿವಾಸಿ ಹಬೀಬ್‌ ಮಿಯಾ ಗನಿ ಮಿಯಾನನ್ನು (37) ಕರ್ನಾಟಕ ಉಗ್ರ ನಿಗ್ರಹ ಪಡೆ ಹಾಗೂ ತ್ರಿಪುರ ಪೊಲೀಸರು ನಡೆಸಿದ ಜಂಟಿ ಕಾರಾರ‍ಯಚರಣೆ ನಡೆಸಿ ಬಂಧಿಸಿದ್ದಾರೆ.

ಈತ ಉಗ್ರವಾದಿ ಸಂಘಟನೆಗಳಾದ ಲಷ್ಕರ್‌-ಎ-ತೊಯ್ಬಾ ಹಾಗೂ ಹರ್ಕತ್‌-ಉಲ್‌-ಜಿಹಾದುಲ್‌-ಇಸ್ಲಾಮ್‌ ಜೊತೆ ನಂಟು ಹೊಂದಿದ್ದ ಎನ್ನಲಾಗುತ್ತಿದ್ದು, ಜೋಗೇಂದ್ರಪುರ ಜಿಲ್ಲೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಹಬೀಬ್‌ನನ್ನು  ಬಂಧಿಸಲಾಗಿದೆ. ಈತನನ್ನು ಸ್ಥಳೀಯ ನ್ಯಾಯಾಲಯಕ್ಕೆ ಶನಿವಾರ ಹಾಜರು ಪಡಿಸಿ ಬಳಿಕ ಕರ್ನಾಟಕ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ತ್ರಿಪುರ ಪೊಲೀಸರು ತಿಳಿಸಿದ್ದಾರೆ.

2005 ಡಿಸೆಂಬರ್ 28ರಂದು ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಸಿ) ಮೇಲೆ  ಉಗ್ರರು ದಾಳಿ ನಡೆಸಿದ್ದರು. ದಾಳಿಯಲ್ಲಿ ದೆಹಲಿ ಐಐಟಿ ಪ್ರೊಫೆಸರ್ ಮುನಿಷ್ ಚಂದ್ರ ಪುರಿ ಎಂಬುವವರು ಸಾವನ್ನಪ್ಪಿದ್ದರು.  ಅಲ್ಲದೆ ನಾಲ್ಕು ಮಂದಿ ಗಾಯಗೊಂಡಿದ್ದರು.

SCROLL FOR NEXT