ದೇಶ

ಪಕ್ಷ ತೊರೆದ ಮಾಧವನ್: ಆಘಾತ ವ್ಯಕ್ತಪಡಿಸಿದ 'ಜಯಾ' ಸೊಸೆ ದೀಪಾ

Manjula VN
ಚೆನ್ನೈ: ಎಂಜಿಆರ್ ಅಮ್ಮಾ ದೀಪಾ ಪೆರವೈ ಪಕ್ಷ ತೊರೆದು, ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ಮಾಧವನ್ ಅವರು ಹೇಳಿದ್ದು, ಪತಿಯ ಹೇಳಿಕೆಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸೋದರ ಸೊಸೆ ದೀಪಾ ಜಯಕುಮಾರ್ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. 
ಮಾಧವನ್ ಅವರ ನಿರ್ಧಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಇದೊಂದು ಪೂರ್ವ ನಿಯೋಜಿತ ಪಿತೂರಿಯಾಗಿದ್ದು, ನನ್ನ ಪತಿಯನ್ನು ಯಾರೋ ತಪ್ಪು ಹಾದಿಗೆ ಎಳೆಯುತ್ತಿದ್ದಾರೆ. ಆರ್.ಕೆ ನಗರ ಉಪಚುನಾವಣೆಯಲ್ಲಿ ಸ್ಪರ್ಧಿಸದಂತೆ ಈ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆಂದು ಹೇಳಿದ್ದಾರೆ. 
ಎಐಎಡಿಎಂಕೆ ಮತ್ತು ತಮಿಳುನಾಡು ಜನತೆ ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕೆಂದು ಈ ಮೂಲಕ ನಾನು ಮನವಿ ಮಾಡಿಕೊಳ್ಳುತ್ತಿದ್ದಾರೆ. ಏನೇ ಆದರೂ ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯುವುದಿಲ್ಲ. ಆರ್.ಕೆ. ನಗರ ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ನಡೆಸಿಯೇ ತೀರುತ್ತೇನೆ. ಪಿತೂರಿ ಹಿಂದೆ ಶಶಿಕಲಾ ಹಾಗೂ ಅವರ ಬಣದವರಿದ್ದಾರೆಂದು ನಾನು ಖಚಿತವಾಗಿ ಹೇಳುತ್ತೇನೆಂದು ತಿಳಿಸಿದ್ದಾರೆ. 
ಕಳೆದೆರಡು ದಿನಗಳಿಂದ ನನ್ನ ಪತಿ ಹೊಸ ಪಕ್ಷ ಸ್ಥಾಪನೆ ಬಗ್ಗೆ ನನ್ನ ಬಳಿ ಏನನ್ನೂ ಮಾತನಾಡಿರಲಿಲ್ಲ. ಇದೀಗ ಇದ್ದಕ್ಕಿದ್ದಂತೆ ಹೇಳಿಕೆಯನ್ನು ನೀಡಿದ್ದಾರೆ. ಈ ಆಘಾತದಿಂದ ನಾನಿನ್ನೂ ಹೊರಬಂದಿಲ್ಲ. ನನ್ನ ಪತಿಯನ್ನು ರಿಮೋಟ್ ಕಂಟ್ರೋಲ್ ನಂತೆ ಬಳಸಿಕೊಳ್ಳುತ್ತಿದ್ದಾರೆ. ನಾವು ಇಂದು ಏನೇ ಮಾಡಿದ್ದರೂ ಎಲ್ಲವನ್ನೂ ಒಟ್ಟಾಗಿ ಸೇರಿಕೊಂಡು ಮಾಡಿದ್ದೇವೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಈ ರೀತಿಯ ಬೆಳವಣಿಗೆಯನ್ನು ನೋಡಿದರೆ ಉಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನನ್ನನ್ನು ತಡೆಯಲು ಈ ರೀತಿಯ ಯತ್ನಗಳನ್ನು ಮಾಡುತ್ತಿದ್ದಾರೆಂಬುದು ಸ್ಪಷ್ಟವಾಗಿ ತೋರುತ್ತದೆ ಹೇಳಿದ್ದಾರೆ. 
SCROLL FOR NEXT