ದೇಶ

ಜಾರ್ಖಂಡ್ ನಲ್ಲಿ ಶೂಟೌಟ್: ಧನ್ ಬಾದ್ ಮಾಜಿ ಉಪ ಮೇಯರ್ ಸೇರಿ 4 ಮಂದಿಯ ಹತ್ಯೆ!

Srinivasamurthy VN

ಧನ್ ಬಾದ್: ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಧನ್ ಬಾದ್ ನಗರದ ಉಪ ಮೇಯರ್ ಮೇಲೆ ದುಷ್ಕರ್ಮಿಗಳು ಮಂಗಳವಾರ ಸಂಜೆ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಉಪ ಮೇಯರ್ ನೀರಜ್ ಸಿಂಗ್ ಅವರು ಸ್ಥಳದಲ್ಲೇ  ಮೃತಪಟ್ಟಿದ್ದಾರೆ.

ಧನ್ ಬಾದ್ ನ ಸರೈಧೆಲಾ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಟೀಲ್ ಗೇಟ್ ಬಳಿ ಗುಂಡಿನ ದಾಳಿ ನಡೆದಿದ್ದು, ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ನೀರಜ್ ಸಿಂಗ್ ಅವರ ಕಾರಿನ ಮೇಲೆ ಸತತ ಗುಂಡಿನ ದಾಳಿ ನಡೆಸಿದ್ದಾರೆ.  ಪರಿಣಾಮ ಕಾಂಗ್ರೆಸ್ ಮುಖಂಡ ನೀರಜ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಸ್ನೇಹಿತ ಅಶೋಕ್ ಯಾದವ್, ಬಾಡಿಗಾರ್ಡ್ ಮತ್ತು ಕಾರು ಚಾಲಕ ಮೃತರಾಗಿದ್ದಾರೆ.

ನೀರಜ್ ಸಿಂಗ್ ಅವರ ಕಾರನ್ನು ಹಿಂಬಾಲಿಸಿದ್ದ ದುಷ್ಕರ್ಮಿಗಳು ಸುಮಾರು 15 ಸುತ್ತು ಗುಂಡು ಹಾರಿಸಿದ್ದು, ನೀರಜ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಸ್ನೇಹಿತ ಅಶೋಕ್ ಯಾದವ್ , ಬಾಡಿಗಾರ್ಡ್ ಹಾಗೂ ಕಾರು  ಚಾಲಕರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಶೂಟೌಟ್ ಬಳಿಕ ಧನ್ ಬಾದ್ ನಗರದಲ್ಲಿ ಪ್ರಕ್ಷುಬ್ಧ ವಾತಾವರಣೆ ನಲೆಸಿದ್ದು, ಮುಂಜಾಗ್ರತಾ ಕ್ರಮವಾಗಿ  ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಅಂತೆಯೇ ಘಟನಾ ಸ್ಥಳದಲ್ಲಿ ಸುಮಾರು 50ಕ್ಕೂ ಹೆಚ್ಚು ಎಕೆ 47 ಬಂದೂಕಿನ ಬುಲೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.

SCROLL FOR NEXT