ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿರುವ ಅಕ್ರಮ ಕಸಾಯಿಖಾನೆಗಳನ್ನು ಬಂದ್ ಮಾಡುವಂತೆ ಆದೇಶಿಸಿದ ಬೆನ್ನಲ್ಲೇ, ಸರ್ಕಾರಿ ನೌಕರರು ಕಚೇರಿಯಲ್ಲಿ ಪಾನ್ ಹಾಗೂ ಗುಟ್ಕಾ ತಿನ್ನುವಂತಿಲ್ಲ ಎಂದು ಬುಧವಾರ ಮತ್ತೊಂದು ಆದೇಶ ಹೊರಡಿಸಿದ್ದಾರೆ.
ಉತ್ತರ ಪ್ರದೇಶಾದ್ಯಂತ ಸರ್ಕಾರಿ ಕಚೇರಿಯಲ್ಲಿ ಪಾನ್ ಮತ್ತು ಗುಟ್ಕಾ ತಿಂದು ಗೋಡೆಯ ಮೇಲೆ ಉಗಿದು ಕೊಳಕು ಮಾಡುವುದು ಸಾಮಾನ್ಯವಾಗಿದ್ದು, ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿರುವ ಯೋಗಿ ಆದಿತ್ಯನಾಥ್ ಅವರು, ಕಚೇರಿ ಸಮಯದಲ್ಲಿ ನೌಕರರು ಪಾನ್, ಗುಟ್ಕಾ ಹಾಗೂ ಇತರೆ ಮಸಾಲಾಗಳನ್ನು ತಿನ್ನುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ.
ಗುಟ್ಕಾ' ಮತ್ತು 'ಜರ್ದಾ' ದಂತಹ ತಂಬಾಕುಗಳು ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಇದರಿಂದಾಗಿ ಭಾರತದಲ್ಲಿ ಪ್ರತಿ ವರ್ಷ ಸುಮಾರು 0.9 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ.
ಇಂದು ಬೆಳಗ್ಗೆಯಷ್ಟೆ ಬಿಜೆಪಿಯ ಚುನಾವಣೆ ಪ್ರಣಾಳಿಕೆಯನ್ನು ಗಮನದಲ್ಲಿಟ್ಟುಕೊಂಡು ಯೋಗಿ ಆದಿತ್ಯನಾಥ್ ಅವರು ರಾಜ್ಯದಲ್ಲಿರುವ ಕಸಾಯಿಖಾನೆಗಳನ್ನು ಬಂದ್ ಮಾಡುವಂತೆ ಮತ್ತು ಗೋವುಗಳ ಕಳ್ಳಸಾಗಣೆಯನ್ನು ನಿಷೇಧಿಸಿದೆ ಆದೇಶ ಹೊರಡಿಸಿದ್ದರು.