ನವದೆಹಲಿ: ಉತ್ತರ ಪ್ರದೇಶದಲ್ಲಿ ಬೀದಿ ಕಾಮಣ್ಣರ ಕಾಟಕ್ಕೆ ಬ್ರೇಕ್ ಹಾಕಲು ಸಿಎಂ ಯೋಗಿ ಆದಿತ್ಯನಾಥ್ ಅವರು ರಚಿಸಿರುವ ಆಂಟಿ ರೋಮಿಯೋ ಸ್ಕ್ವಾಡ್ ನ್ನು ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಉತ್ತರ ಪ್ರದೇಶದಲ್ಲಿ ಯಾದವ ಹಾಗೂ ಇನ್ನಿತರ ನಿರ್ದಿಷ್ಟ ಜಾತಿಯವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ನಿರ್ದಿಷ್ಟ ಜಾತಿಯವರನ್ನು ಟಾರ್ಗೆಟ್ ಮಾಡಲಾಗುತ್ತಿರುವ ಬಗ್ಗೆ ಐಪಿಎಸ್ ಅಧಿಕಾರಿಯೊಬ್ಬರೂ ಹೇಳಿದ್ದಾರೆ. ಮುಸ್ಲಿಮರು, ಯಾದವರು ಹಾಗೂ ದಲಿತರ ನಡುವೆ ವೈಷಮ್ಯ ಉಂಟುಮಾಡಲು ಯತ್ನಿಸುತ್ತಿರುವುದು ನಮ್ಮ ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ರಂಜನ್ ಸಂಸತ್ ನಲ್ಲಿ ಹೇಳಿದ್ದಾರೆ.
ರಂಜೀತ್ ರಂಜನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಜಾತಿಯ ಆಧಾರದಲ್ಲಿ ತಾರತಮ್ಯ ಉಂಟಾಗದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಿದ್ದಾರೆ.
ಸರ್ಕಾರ ರಚನೆಯಾಗಿ ಇನ್ನೂ 3-4 ದಿನಗಳು ಕಳೆದಿವೆಯಷ್ಟೆ, ಧರ್ಮ, ಸಮುದಾಯ, ಜಾತಿಯ ಆಧಾರದಲ್ಲಿ ತಾರತಮ್ಯ ಉಂಟಾಗುವುದಿಲ್ಲ, ಇದನ್ನೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಹೇಳಿದ್ದಾರೆ ಎಂದು ರಾಜನಾಥ್ ಸಿಂಗ್ ಸಂಸತ್ ಗೆ ಹೇಳಿದ್ದಾರೆ. ಹಿಮಾಂಶು ಕುಮಾರ್ ಎಂಬ ಐಪಿಎಸ್ ಅಧಿಕಾರಿ ಟ್ವೀಟ್ ನಲ್ಲಿ ಯಾದವ್ ಎಂಬ ಉಪನಾಮ ಇರುವವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಆದರೆ ನಂತರ ಅದನ್ನು ಡಿಲೀಟ್ ಮಾಡಿದ್ದರು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ವಿಷಯವನ್ನು ಸಂಸತ್ ನಲ್ಲಿ ಪ್ರಸ್ತಾಪಿಸಿದ್ದು, ಉತ್ತರ ಪ್ರದೇಶದಲ್ಲಿ ಜಾತಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.