ನವದೆಹಲಿ: ಅಂತಾರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಭಾರತದೊಳಗೆ ಬಂದು ಭಾರತೀಯ ಯೋಧರ ಕೊಂದು ಅವರ ಶಿರಚ್ಛೇದ ಮಾಡಲು ಪಾಕಿಸ್ತಾನ ಸೈನಿಕರಿಗೆ ಆದೇಶಿಸಿದ್ದು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಜ್ವಾ ಎಂದು ವರದಿಯಾಗಿದೆ.
ಪಾಕಿಸ್ತಾನದ ಹಾಜಿ ಪೀರ್ ನಲ್ಲಿರುವ ಸೇನಾ ನೆಲೆಗಳಿಗೆ ಖಮರ್ ಜಾವೇದ ಬಜ್ವಾ ಏಪ್ರಿಲ್ 30ರಂದು ಭೇಟಿ ನೀಡಿದ್ದರು ಎಂದು ಗುಪ್ತಚರ ಮತ್ತು ಸೇನಾ ಮೂಲಗಳು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಕಳೆದ ಏಪ್ರಿಲ್ 17ರಂದು ಪಾಕಿಸ್ತಾನ ಸೈನಿಕರು ರಜೌರಿಯ ಜನವಾಸ ಪ್ರದೇಶದ ಮತ್ತು ಭಾರತೀಯ ಸೇನಾ ನೆಲೆಗಳ ಮೇಲೆ ಗುಂಡಿನ ದಾಳಿ ನಡೆಸಿತ್ತು ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಗುಂಡಿನ ಸುರಿಮಳೆ ಗೈದಿದ್ದರು. ಇದರಲ್ಲಿ ಪಾಕಿಸ್ತಾನದ 10 ಸೈನಿಕರು ಬಲಿಯಾಗಿದ್ದು ಇದಕ್ಕೆ ಪ್ರತೀಕಾರವಾಗಿ ಭಾರತದ ಮೇಲೆ ದಾಳಿ ನಡೆಸುವಂತೆ ಬಜ್ವಾ ಆದೇಶಿಸಿದ್ದರು ಎಂದು ಪತ್ರಿಕೆ ವರದಿ ಮಾಡಿದೆ.