ಚಂಡೀಗಢ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಭಾರತೀಯ ಯೋಧ ಪರಮ್ಜಿತ್ ಸಿಂಗ್ ಅವರ ಕುಟುಂಬಸ್ಥರಿಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟೆನ್ ಅಮರೀಂದರ್ ಸಿಂಗ್ ಅವರೂ ರೂ.12 ಲಕ್ಷ ಪರಿಹಾರ ನೀಡುವುದಾಗಿ ಮಂಗಳವಾರ ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ಪಂಜಾಬ್ ರಾಜ್ಯ ಸರ್ಕಾರಿ ವಕ್ತಾರ ಪ್ರತಿಕ್ರಿಯೆ ನೀಡಿದ್ದು, ಹುತಾತ್ಮ ಯೋಧರಿಗೆ ಸರ್ಕಾರ ರೂ.12 ಲಕ್ಷ ಪರಿಹಾರವನ್ನು ನೀಡಲಿದೆ. ಮೊದಲಿಗೆ ರೂ.5 ಲಕ್ಷವನ್ನು ನಗದು ರೂಪದಲ್ಲಿ ನೀಡಲಿದೆ. ರೂ.5 ಲಕ್ಷವನ್ನು ಯೋಧನ ಪತ್ನಿ ಹಾಗೂ ಮಕ್ಕಳಿಗೆ ನೀಡುತ್ತೇವೆ. ರೂ.2 ಲಕ್ಷವನ್ನು ಪೋಷಕರಿಗೆ ನೀಡುತ್ತೇವೆಂದು ಹೇಳಿದ್ದಾರೆ.
ಅಲ್ಲದೆ, ಯೋಧನ ಕುಟುಂಬಸ್ಥರೊಬ್ಬರಿಗೆ ಅವರಿಗೆ ಸೂಕ್ತವೆನಿಸುವ ಸರ್ಕಾರಿ ಹುದ್ದೆಯೊಂದನ್ನು ನೀಡಲಾಗುತ್ತದೆ. ಅಲ್ಲದೆ. ಯೋಧನ ಮಕ್ಕಳಿಗೆ ಪದವಿವರೆಗೂ ಉಚಿತ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪರಮ್ಜಿತ್ ಸಿಂಗ್ ಅವರ ಹುಟ್ಟೂರು ಟಾರ್ನ್ ತರಣ್ ಗ್ರಾಮಕ್ಕೆ ಮೇ.7ಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಲಿದ್ದು, ಯೋಧರ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಸಂಪುಟ ಸಹೋದ್ಯೋಗಿ ರಾಣಾ ಗುರ್ಜಿತ್ ಸಿಂಗ್ ಅವರನ್ನು ಅವರೊಂದಿಗೆ ಮಾತುಕತೆ ನಡೆಸಿರುವ ಅಮರೀಂದರ್ ಸಿಂಗ್ ಅವರು, ತಮ್ಮ ಭೇಟಿಗೂ ಮುನ್ನ ಯೋಧರ ಕುಟುಂಬಸ್ಥರನ್ನು ಭೇಟಿಯಾಗುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ.
ನಿನ್ನೆಯಷ್ಟೇ ಹುತಾತ್ಮರಾದ ಯೋಧನಿಗೆ ಅಂತಿನ ನಮನ ಸಲ್ಲಿಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿಗಳು ಹಾಗೂ ಹಿರಿಯ ಅಧಿಕಾರಿಗಳು ಗೈರು ಹಾಜರಿದ್ದರು. ಇದಕ್ಕೆ ಯೋಧನ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಯೋಧನ ಸಹೋದರ ರಂಜಿತ್ ಸಿಂಗ್ ಮಾತನಾಡಿ, ನನ್ನ ಅಣ್ಣ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಕುಟುಂಬಕ್ಕಾಗಿ ಅಲ್ಲ. ಅಂತಿನ ನಮನದ ವೇಳೆ ಮುಖ್ಯಮಂತ್ರಿಗಳು ಸ್ಥಳಕ್ಕೆ ಬರಬೇಕಿತ್ತು. ಅಮರೀಂದರ್ ಸಿಂಗ್ ಅವರೂ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಂತಹ ವ್ಯಕ್ತಿ. ನಮ್ಮ ನೋವು ಅರ್ಥವಾಗಬೇಕು. ಕೇವಲ ಮುಖ್ಯಮಂತ್ರಿಗಳಷ್ಟೇ ಅಲ್ಲ ಅಧಿಕಾರಿಗಳಾರೂ ನಮ್ಮೊಂದಿರಲಿಲ್ಲ ಎಂದು ಹೇಳಿದ್ದಾರೆ.