ಕಪಿಲ್ ಮಿಶ್ರಾ ಹಾಗೂ ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ
ನವದೆಹಲಿ: ಕುಮಾರ್ ವಿಶ್ವಾಸ್ ಅವರ ಜತೆಗೂಡಿ ಆಮ್ ಆದ್ಮಿ ಪಕ್ಷದ ನಾಯಕತ್ವದ ವಿರುದ್ಧವೇ ಸಡ್ಡು ಹೊಡೆದಿದ್ದ ಪ್ರವಾಸೋದ್ಯಮ ಸಚಿವ ಕಪಿಲ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲಾಗಿದೆ.
ಕಪಿಲ್ ಮಿಶ್ರಾ ಅವರನ್ನು ಕೈಬಿಟ್ಟಿರುವ ಬೆನ್ನಲ್ಲೇ ಸೀಮಪುರಿ ಶಾಸಕ ರಾಜೇಂದ್ರ ಪಾಲ್ ಗೌತಮ್ ಮತ್ತು ನಜಾಫ್'ಗಢದ ಶಾಸಕ ಕೈಲಾಶ್ ಗೆಹ್ಲೋಟ್ ಅವರು ನೂತನವಾಗಿ ಕೇಜ್ರಿವಾಲ್ ಅವರ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.
ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಸಚಿವ ಮಿಶ್ರಾರನ್ನು ವಜಾ ಮಾಡಲಾಗಿದೆ.
ಸಚಿವ ಮಿಶ್ರಾ ಹೆಚ್ಚುವರಿ ಮೌಲ್ಯದ ಬಿಲ್ ಗಳನ್ನು ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಂತ್ರಿ ಸ್ಥಾನದಿಂದ ವಜಾ ಮಾಡುತ್ತಿದ್ದಂತೆ ಕ್ರೋಧಗೊಂಡ ಆಪ್ ಶಾಸಕ ಮಿಶ್ರಾ, ಹಗರಣದಲ್ಲಿ ತೊಡಗಿದ ಕೆಲ ಆಮ್ ಆದ್ಮಿ ಪಕ್ಷದ ನಾಯಕರ ಬಣ್ಣ ಬಯಲು ಮಾಡುತ್ತೇನೆಂದು ಗುಡುಗಿದ್ದಾರೆ.
ಭ್ರಷ್ಟಾಚಾರ ಆರೋಪವಿಲ್ಲದ, ಸಿಬಿಐ ವಿಚಾರಣೆ ಎದುರಿಸದ ಏಕೈಕ ಸಚಿವ ನಾನು. ನನಗೆ ಮಾಹಿತಿಯನ್ನೂ ನೀಡದೆ ನನ್ನನ್ನು ಸಂಪುಟದಿಂದ ಹೊರಹಾಕಲಾಗಿದೆ. ನನ್ನ ವಜಾ ಮಾಡಿರುವ ನಿರ್ಧಾರವನ್ನು ಕ್ಯಾಬಿನೆಟ್ ಅಥವಾ ರಾಜಕೀಯ ವ್ಯವಹಾರಗಳ ಸಮಿತಿ ಕೈಗೊಂಡಿರಲಾರದು. ಇದು ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಏಕಪಕ್ಷೀಯ ನಿರ್ಧಾರವಾಗಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದು ಕಪಿಲ್ ಮಿಶ್ರಾ ಅವರು ಹೇಳಿಕೊಂಡಿದ್ದಾರೆ.
ಶುಕ್ರವಾರವಷ್ಟೇ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾಗಿ ಹಗರಣದಲ್ಲಿ ಭಾಗಿಯಾದ ನಾಯಕರ ಕುರಿತ ದಾಖಲೆಗಳನ್ನು ನೀಡಿದ್ದೇನೆಂದು ಇದೇ ವೇಳೆ ಅವರು ತಿಳಿಸಿದ್ದಾರೆ.