ಪಾಟ್ನಾ: ಬಿಹಾರದಲ್ಲಿ ಮಂಗಳವಾರ ಹಠಾತ್ತನೆ ಬೀಸಿದ ಬಿರುಗಾಳಿಯಿಂದಾಗಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರದ ಹಲವು ಕಡೆ ಇಂದು ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಮಳೆಯಿಂದಾಗಿ 11 ಜಿಲ್ಲೆಗಳಲ್ಲಿ ಬೆಳೆ ನಾಶವಾಗಿವೆ ಮತ್ತು ಹಲವು ಮನೆಗಳು ಕುಸಿದು ಬಿದ್ದಿವೆ. ಅಲ್ಲದೆ ಹಲವು ಮರಗಳು ಧರೆಗುರುಳಿವೆ.
ಲಖಿಸರಾಯಿ, ಔರಂಗಬಾದ್, ಮಧುಬನಿ ಮತ್ತು ಬೆಗುಸರಾಯಿ ಜಿಲ್ಲೆಯಲ್ಲಿ ತಲಾ ಇಬ್ಬರು ಹಾಗೂ ಪಾಟ್ನಾ ನಲಂದಾ, ಪುರ್ಣೆಯಿ, ದರ್ಬಾಂಗ್, ಸುಪೌಲ್, ಅರರಿಯಾ ಮತ್ತು ಮುಂಗೆರ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣೆ ಇಲಾಖೆ ಪ್ರಧಾನ ಕಾರ್ಯದರ್ಶಿಪ್ರತ್ಯಯ್ ಅಮೃತ್ ಅವರು ತಿಳಿಸಿದ್ದಾರೆ.
ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರುಪಾಯಿ ಪರಿಹಾರ ಘೋಷಿಸಿದ್ದಾರೆ ಎಂದು ಅಮೃತ್ ಹೇಳಿದ್ದಾರೆ. ಅಲ್ಲದೆ ಮಳೆಯಿಂದಾದ ಹಾನಿ ಬಗ್ಗೆ ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ.