ಅಹ್ಮದಾಬಾದ್: ಮದ್ಯ ಸೇವಿಸಿ ವಿಮಾನ ನಿಲ್ದಾಣಕ್ಕೆ ಬಂದು ವಿಮಾನ ನಿಲ್ದಾಣ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಕ್ಕಾಗಿ ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಪುತ್ರನನ್ನು ಕತಾರ್ ಏರ್ವೇಸ್ ವಿಮಾನ ಹತ್ತಲು ನಿರಾಕರಿಸಿದ ಘಟನೆ ನಿನ್ನೆ ನಡೆದಿದೆ.
ಸುಮಾರು 30 ವರ್ಷ ವಯಸ್ಸಿನ ಜೈಮನ್ ಪಟೇಲ್ ತಮ್ಮ ಪತ್ನಿ ಝಲಕ್ ಮತ್ತು ಪುತ್ರಿ ವೈಶ್ವಿ ಜೊತೆ ವಿಮಾನ ಹತ್ತಲು ನಿಲ್ದಾಣಕ್ಕೆ ಆಗಮಿಸಿದ್ದರು. ನಿನ್ನೆ ಬೆಳಗ್ಗೆ 4 ಗಂಟೆಗೆ ವಿಮಾನ ಹೊರಡಬೇಕಾಗಿತ್ತು. ಆದರೆ ಜೈಮನ್ ಪಟೇಲ್ ಮದ್ಯ ಸೇವಿಸಿ ಬಂದು ವಾಗ್ವಾದ ನಡೆಸಿದ್ದರಿಂದ ವಿಮಾನ ಹತ್ತಲು ಸಿಬ್ಬಂದಿ ಬಿಡಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೈಮನ್ ಕುಟುಂಬ ಗ್ರೀಸ್ ಗೆ ರಜೆಯಲ್ಲಿ ಪ್ರವಾಸಕ್ಕೆ ಹೊರಟಿದ್ದರು.
ಜೈಮನ್ ಪಟೇಲ್ ಭೂ ಮಾರಾಟಗಾರರಾಗಿದ್ದು ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕುಡಿದ ಮತ್ತಿನಲ್ಲಿಯೇ ಆಗಮಿಸಿದ್ದರು. ಅವರಿಗೆ ನಡೆಯಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಅಸಹಜ ಸ್ಥಿತಿಯಲ್ಲಿದ್ದರಿಂದ ವಲಸೆ ಮತ್ತು ಇತರ ತಪಾಸಣೆಗೆ ವೀಲ್ ಚೇರ್ ನಲ್ಲಿ ಕುಳಿತುಕೊಂಡು ಹೋದರು. ತಪಾಸಣೆ ನಡೆಸುವಾಗ ವಿಮಾನ ನಿಲ್ದಾಣದ ಸಿಬ್ಬಂದಿ ಜೊತೆ ವಾಗ್ವಾದಕ್ಕಿಳಿದಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಮಧ್ಯೆ ನಿನ್ನೆ ಸಂಜೆ ಮಾಧ್ಯಮಗಳಿಗೆ ಗಾಂಧಿನಗರದಲ್ಲಿ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್, ತಮಗೆ ಕೆಟ್ಟ ಹೆಸರು ತರಲು ನಡೆಸಿರುವ ಕುತಂತ್ರವಿದು. ನನ್ನ ಪುತ್ರ, ಆತನ ಮಡದಿ ಮತ್ತು ಮೊಮ್ಮಗಳು ರಜೆಗೆಂದು ತೆರಳಿದ್ದರು. ತಮ್ಮ ಪುತ್ರನ ಆರೋಗ್ಯ ಚೆನ್ನಾಗಿರಲಿಲ್ಲ ಎಂದು ಹೇಳಿದ್ದಾರೆ.
ಸೊಸೆ ಮನೆಗೆ ಕರೆ ಮಾಡಿ ವಿಷಯ ತಿಳಿಸಿದಳು. ನಂತರ ಪ್ರವಾಸಕ್ಕೆ ಹೋಗದೆ ಹಿಂತಿರುಗಲು ತೀರ್ಮಾನಿಸಿದರು ಎಂದು ಉಪ ಮುಖ್ಯಮಂತ್ರಿ ತಿಳಿಸಿದ್ದಾರೆ. ಸುಳ್ಳು ಮತ್ತು ಹಾದಿ ತಪ್ಪಿಸುವ ಮಾಹಿತಿ ನೀಡಿ ವಿರೋಧ ಪಕ್ಷದವರು ನಮ್ಮ ದಾರಿ ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ನಿತಿನ್ ಪಟೇಲ್ ಆಪಾದಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos