ಗಡಿಯಲ್ಲಿ ಉದ್ವಿಗ್ನ ವಾತಾವರಣ ಮುಂದುವರೆದ ಹಿನ್ನಲೆಯಲ್ಲಿ ಸ್ಥಳಾಂತರಗೊಳ್ಳುತ್ತಿರುವ ಕುಟುಂಬ
ಜಮ್ಮು: ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನದ ತನ್ನ ಉದ್ಧಟತನವನ್ನು ಮುಂದುವರೆಸಿದ್ದು, ಪಾಕಿಸ್ತಾನ ಸೇನೆ ನಡೆಸುತ್ತಿರುವ ನಿರಂತರ ಶೆಲ್'ಗಳ ದಾಳಿಯಿಂದಾಗಿ ಗಡಿಯಲ್ಲಿರುವ 10,000 ಜನತೆ ಇದೀಗ ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ.
ನೌಸೆಲಾ, ಪುಲ್ವಾಮಾ ಮತ್ತು ರಜೌರಿ ಜಿಲ್ಲೆಗಳ ನಾಗರಿಕ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ನಡೆಸುತ್ತಿರುವ ಅಪ್ರಚೋದಿತ ದಾಳಿಗೆ ಅಪಾರ ಪ್ರಮಾಣದ ಆಸ್ತಿ ನಾಶಗೊಂಡಿದೆ. ಪಾಕಿಸ್ತಾನ ನಡೆಸಿದ ಶೆಲ್ ದಾಳಿಗೆ ಕಳೆದೆರಡು ದಿನಗಳ ಹಿಂದಷ್ಟೇ ಇಬ್ಬರು ನಾಗರಿಕರು ಸಾವನ್ಪನಪ್ಪಿದ್ದರು, ಅಲ್ಲದೆ, ಮತ್ತೋರ್ವ ನಾಗರಿಕ ಗಂಭೀರವಾಗಿ ಗಾಯಗೊಂಡಿದ್ದ.
ಪಾಕಿಸ್ತಾನ ಪಡೆಗಳು ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಗಡಿಯಲ್ಲಿ ನಡೆಸುತ್ತಿರುವ ಶೆಲ್ ದಾಳಿಗೆ ಜನರು ಭಯಭೀತರಾಗಿದ್ದಾರೆ. ಶೆಲ್ ದಾಳಿಯಿಂದಾಗಿ 1,100 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ನಿನ್ನೆಯಷ್ಟೇ ಸ್ಥಳಾಂತರಿಸಲಾಗಿತ್ತು.
ಪಾಕಿಸ್ತಾನದ ಪಡೆಗಳ ಈ ದುರ್ವರ್ತನೆಗೆ ಭಾರತೀಯ ಸೇನೆ ದಿಟ್ಟ ಉತ್ತರವನ್ನೇ ನೀಡುತ್ತಿದ್ದು, ಗಡಿನುಸುಳುವ ನುಸುಳುಕೋರರಿಗೆ ತಕ್ಕ ಪ್ರತ್ಯುತ್ತವನ್ನೇ ನೀಡಿ, ಹಿಮ್ಮೆಟ್ಟುವಂತೆ ಮಾಡುತ್ತಿದ್ದಾರೆಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಹೇಳಿದ್ದಾರೆ.
ನಿನ್ನೆ ಕೂಡ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘನೆ ಮಾಡಿ, ಭಾರತೀಯ ಸೇನೆ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿತ್ತು. 82 ಎಂಎಂ ಮತ್ತು 120 ಎಂಎಂ ಮಾರ್ಟರ್ ಶೆಲ್ ಗಳ ಮೂಲಕ ದಾಳಿ ನಡೆಸಿತ್ತು. ಈಗಲೂ ಗಡಿಯಲ್ಲಿನ ವಾತಾವರಣ ಬೂದಿ ಮುಚ್ಚಿದ ಕೆಂಡದಂತೆಯೇ ಇದ್ದು, ಆಗಾಗ ಗುಂಡಿನ ಚಕಮಕಿ ಶಬ್ಧ ಕೇಳಿಬರುತ್ತಿವೆ ಎಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos