ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವಾಗಲೇ ಗುಜರಾತ್ ಕಾಂಗ್ರೆಸ್ ನಲ್ಲಿ ಭಿನ್ನಮತ ಉಂಟಾಗಿರುವ ಲಕ್ಷಣ ಕಾಣಿಸುತ್ತಿದೆ. ಗುಜರಾತ್ ಕಾಂಗ್ರೆಸ್ ನ ನಾಯಕರಾಗಿರುವ ಶಂಕರ್ ಸಿಂಗ್ ವಘೇಲಾ ಪಕ್ಷದ ಸಭೆಗೆ ಗೈರು ಹಾಜರಾಗಿ, ಟ್ವಿಟರ್ ನಲ್ಲಿ ರಾಹುಲ್ ಗಾಂಧಿ ಅವರನ್ನೂ ಸೇರಿ ಒಟ್ಟು 30 ನಾಯಕರನ್ನು ಅನ್ ಫಾಲೋ ಮಾಡಿದ್ದಾರೆ.
ಶಂಕರ್ ಸಿಂಗ್ ವಘೇಲಾ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳಿದ್ದು, ಕಾಂಗ್ರೆಸ್ ತೊರೆಯುವ ವದಂತಿಗಳನ್ನು ನಿರಾಕರಿಸಿದ ನಂತರವೂ ಶಂಕರ್ ಸಿಂಗ್ ವಘೇಲಾ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸೋನಿಯಾ ಗಾಂಧಿ ಅವರ ರಾಜಕೀಯ ಸಲಹೆಗಾರ ಅಹ್ಮದ್ ಪಟೇಲ್ ಅವರನ್ನು ಟ್ವಿಟರ್ ನಲ್ಲಿ ಅನ್ ಫಾಲೋ ಮಾಡಿ ಪಕ್ಷದ ಸಭೆಗೆ ಗೈರಾಗಿರುವುದು ಅಚ್ಚರಿ ಮೂಡಿಸಿದೆ..
ಈ ಬೆಳವಣಿಗೆ ನಂತರ ವಘೇಲಾ ಅವರನ್ನು ಸಂಪರ್ಕಿಸಲು ಮಾಧ್ಯಮಗಳು ಪ್ರಯತ್ನಿಸುತ್ತಿವೆಯಾದರೂ, ಪ್ರತಿಕ್ರಿಯೆ ನೀಡಲು ಸಿಗುತ್ತಿಲ್ಲ. ಗುಜರಾತ್ ಮುಖ್ಯಮಂತ್ರಿ ಅಭ್ಯರ್ಥಿಯಾಗುವ ವಿಚಾರದಲ್ಲಿ ವಘೇಲಾ ಹಾಗೂ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಭರತ್ ಸಿಂಗ್ ಸೋಲಂಕಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಹೇಳಲಾಗುತ್ತಿದೆ.