ನವದೆಹಲಿ:ಕಾನೂನುಬದ್ಧವಾಗಿ ವಿಚ್ಛೇದನ ಸಿಗುವವರೆಗೂ ಪತ್ನಿಯ ಖರ್ಚು-ವೆಚ್ಚ, ಪಾಲನೆ, ರಕ್ಷಣೆ ನೋಡಿಕೊಳ್ಳುವುದು ಪತಿಯ ಜವಾಬ್ದಾರಿ ಎಂದು ದೆಹಲಿ ನ್ಯಾಯಾಲಯ ಹೇಳಿದೆ.
ಪರಿತ್ಯಕ್ತ ಪತ್ನಿಯ ಖರ್ಚು ವೆಚ್ಚಕ್ಕಾಗಿ 5 ,000 ರೂಪಾಯಿ ನೀಡಬೇಕೆಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಆಕೆ ತನ್ನನ್ನು ಮದುವೆಯಾಗುವ ಮುಂಚೆ ಬೇರೊಬ್ಬನನ್ನು ಮದುವೆಯಾಗಿದ್ದಳು. ಹೀಗಾಗಿ ನಮ್ಮದು ಕಾನೂನು ಪ್ರಕಾರ ವಿವಾಹವಲ್ಲ, ಅದಲ್ಲದೆ ಪರಿತ್ಯಕ್ತ ಪತ್ನಿಯನ್ನು ಏಕೆ ನೋಡಿಕೊಳ್ಳಬೇಕು ಎಂದು ದೆಹಲಿಯ ಸೆಷನ್ಸ್ ಕೋರ್ಟ್ ಮುಂದೆ ವ್ಯಕ್ತಿಯೊಬ್ಬರು ಮೇಲ್ಮನವಿ ಸಲ್ಲಿಸಿದ್ದರು.
ಹಿಂದೂ ವಿವಾಹ ಕಾಯ್ದೆ ಪ್ರಕಾರ, ದೇಶೀಯ ಹಿಂಸೆ ಕಾನೂನಿನಡಿಯಲ್ಲಿ ಪತ್ನಿಗೆ ವಿಚ್ಛೇದನ ನೀಡುವವರೆಗೂ ಆಕೆಯ ಖರ್ಚು ವೆಚ್ಚಗಳು, ರಕ್ಷಣೆಯನ್ನು ಪತಿ ನೋಡಿಕೊಳ್ಳಬೇಕು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜಗದೀಶ್ ಕುಮಾರ್ ತಿಳಿಸಿದ್ದಾರೆ.
ವಿಚಾರಣಾ ನ್ಯಾಯಾಲಯದಲ್ಲಿ ಅಕ್ರಮತೆ, ದೌರ್ಬಲ್ಯ ಅಥವಾ ಅನ್ಯಾಯವಿಲ್ಲ ಎಂದು ವ್ಯಕ್ತಿಯ ಮೇಲ್ಮನವಿಯನ್ನು ತಿರಸ್ಕರಿಸಿದ ನ್ಯಾಯಾಲಯ, ವಿಚ್ಛೇದನದ ಸಮಯದಲ್ಲಿ ಅಂತಿಮ ಒಪ್ಪಂದದ ಸಮಯದಲ್ಲಿ ಪರಿಹಾರದ ಮೊತ್ತವನ್ನು ಬದಲಾಯಿಸಬಹುದು ಎಂದು ಹೇಳಿದೆ.
ಮಹಿಳೆ ತನ್ನ ದೂರಿನಲ್ಲಿ 2013ರ ಮಾರ್ಚ್ ನಲ್ಲಿ ತನ್ನನ್ನು ವಿವಾಹವಾದ ನಂತರ ಪತಿ ಹಾಗೂ ಮನೆಯವರು ಕಿರುಕುಳ ನೀಡಲಾರಂಭಿಸಿದರು. ಮದುವೆಯಾದ ಎರಡೇ ತಿಂಗಳಲ್ಲಿ ಮನೆಯಿಂದ ಹೊರಹಾಕಿದರು. ಇದರಿಂದಾಗಿ ತಾನು ಕಾನೂನಿನ ಮೊರೆ ಹೋದೆನು. ತನಗೆ ಮೊದಲೇ ಮದುವೆಯಾಗಿತ್ತು ಎಂದು ಗಜಿಯಾಬಾದಿನಲ್ಲಿ ನಕಲಿ ಹಿಂದೂ ವಿವಾಹ ರಿಜಿಸ್ಟರ್ ಮಾಡಿಸಿದ್ದಾರೆ ಎಂದು ಮಹಿಳೆ ಆಪಾದಿಸಿದ್ದರು.
ಇದನ್ನು ಪರಿಶೀಲಿಸಿದ ನ್ಯಾಯಾಲಯ, ಮಹಿಳೆ ಮೊದಲೇ ಮದುವೆಯಾಗಿದ್ದರು ಎಂದು ವಿಶೇಷ ವಿವಾಹ ಕಾಯ್ದೆಯಡಿ ಹೊರಡಿಸಲಾದ ಮದುವೆ ಪ್ರಮಾಣಪತ್ರ ವಾದವನ್ನು ಪುಷ್ಟೀಕರಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos