ಪಾಟ್ನಾ: ಏಕಕಾಲಕ್ಕೆ ಲೋಕಸಭೆ-ವಿಧಾನಸಭೆ ಚುನಾವಣೆಗಳನ್ನು ನಡೆಸುವ ಮಾತನ್ನಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯನ್ನು ವಿಸರ್ಜಿಸಿ ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯೊಂದಿಗೆ ಏಕಕಾಲಕ್ಕೆ ಲೋಕಸಭೆಯ ಚುನಾವಣೆಯನ್ನೂ ನಡೆಸಲಿ ಎಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಸವಾಲು ಹಾಕಿದ್ದಾರೆ.
ಲೋಕಸಭೆ-ವಿಧಾನಸಭೆಗಳ ಚುನಾವಣೆಯನ್ನು ಏಕಕಾಲಕ್ಕೆ ನಡೆಸುವ ಮೂಲಕ ರಾಜಕೀಯ ಸ್ಥಿರತೆ ತರುವ ನೀತಿ ಆಯೋಗದ ಪ್ರಸ್ತಾವನೆಯನ್ನು ಬಿಜೆಪಿ ನಾಯತ್ವ ಒಪ್ಪಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್, ಪ್ರಧಾನಿ ನರೇಂದ್ರ ಮೋದಿ ಲೋಕಸಭೆ ವಿಸರ್ಜಿಸಲಿ, ಬಳಿಕ ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಳೊಂದಿಗೆ ಲೋಕಸಭೆಯ ಚುನಾವಣೆಯನ್ನೂ ನಡೆಸಲಿ ಇದರಿಂದ ಮೋದಿ ತಮ್ಮ ಸಾಮರ್ಥ್ಯ, ಜನಪ್ರಿಯತೆಯನ್ನೂ ಅರಿತುಕೊಳ್ಳಬಹುದು ಎಂದು ಸಲಹೆ ನೀಡಿದ್ದಾರೆ.
ಮೋದಿ ಸರ್ಕಾರ 3 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಲಾಲು ಪ್ರಸಾದ್ ಯಾದವ್, ವಿಧಾನಸಭೆ ಚುನಾವಣೆ, ಉಪಚುನಾವಣೆಗಳಲ್ಲಿ ಬಿಜೆಪಿ ಗೆದ್ದಿರುವುದು ವಿಪಕ್ಷಗಳಲ್ಲಿದ್ದ ಒಡಕಿನಿಂದ, ವಿಪಕ್ಷಗಳು ಒಗ್ಗಟ್ಟಿನಿಂದ ಇರುವ ಕಡೆ ಬಿಜೆಪಿ ಸೋತಿದೆ. ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳ ಪೈಕಿ ಯಾವುದನ್ನೂ ಕಳೆದ ಮೂರು ವರ್ಷಗಳಲ್ಲಿ ಈಡೇರಿಸಿಲ್ಲ. ಎಲ್ಲಾ ರಂಗಗಳಲ್ಲೂ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos