ನವದೆಹಲಿ: ರೊಹ್ಟಕ್ ಗ್ಯಾಂಗ್ ರೇಪ್ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವಾಗ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪುದುಚೆರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಪೋಷಕರು ತಮ್ಮ ಗಂಡು ಮಕ್ಕಳನ್ನು ಯಾವತ್ತೂ ಗಮನಿಸುತ್ತಿರಬೇಕು ಎಂದು ಹೇಳಿದ್ದಾರೆ.
ಗಂಡು ಮಗು ಬೇಕೆಂದು ಆಸೆಪಡುವ ಪೋಷಕರು ತಮ್ಮ ಮಗ ಮುಂದೆ ದೊಡ್ಡವನಾದ ಮೇಲೆ ಯಾವ ರೀತಿ ಬೆಳೆಯಬೇಕು, ಏನಾಗಬೇಕು ಎಂಬ ಬಗ್ಗೆಯೂ ಯೋಚಿಸಬೇಕು. ಗಂಡು ಮಕ್ಕಳು ಸಮಾಜಕ್ಕೆ ಒಂದು ಆಸ್ತಿಯಾಗಿ ಬದಲಾಗಬಹುದು ಇಲ್ಲವೇ ಸಮಾಜಘಾತುಕರಾಗಿ ಕೂಡ ಬೆಳೆಯಬಹುದು ಎಂದು ಕಿರಣ್ ಬೇಡಿ ಅಭಿಪ್ರಾಯಪಟ್ಟರು.
ಪೋಷಕರು ತಮ್ಮ ಮಕ್ಕಳನ್ನು ಜವಾಬ್ದಾರಿಯುತವಾಗಿ ಮತ್ತು ಜಾಗ್ರತೆಯಿಂದ ಪೋಷಿಸಿ ಬೆಳೆಸದಿದ್ದರೆ ಹರ್ಯಾಣ ಮಾದರಿಯ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ ಎಂದು ವಿಷಾದ ವ್ಯಕ್ತಪಡಿಸಿದರು.
ಪೋಷಕರು ಗಂಡು ಮಗು ಬೇಕೆಂದು ಬಯಸುತ್ತಾರೆ. ಆದರೆ ಎಂತಹ ಮಕ್ಕಳು? ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಮತ್ತು ಸಮಾಜಕ್ಕೆ ಒಂದು ಉತ್ತಮ ಸ್ವತ್ತು ಆಗಿರುವ ಮಕ್ಕಳೇ ಅಥವಾ ಸಮಾಜ ಘಾತುಕರೇ? ಮಕ್ಕಳನ್ನು ಸರಿಯಾಗಿ ಪೋಷಿಸಿದರೆ ಸಮಾಜದ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿಗಳಾಗುತ್ತಾರೆ ಎಂದರು.
ಹೆಣ್ಣು ಮಗು ಬೇಡ, ಗಂಡು ಬೇಕೆಂದು ಆಶಿಸುವವರ ಮೇಲೆ ಕೂಡ ಕಿರಣ್ ಬೇಡಿ ಆಕ್ರೋಶ ವ್ಯಕ್ತಪಡಿಸಿದರು. ಹೆಣ್ಣು ಮಕ್ಕಳ ಮೇಲೆ ತೀವ್ರ ನಿಗಾ ಇಡಲಾಗುತ್ತದೆ. ಅವರನ್ನು ಕಟ್ಟುನಿಟ್ಟು ಶಿಸ್ತಿನಿಂದ ಬೆಳೆಸಲಾಗುತ್ತದೆ. ಆದರೆ ಗಂಡು ಮಕ್ಕಳನ್ನು ಬೇಕಾಬಿಟ್ಟಿಯಾಗಿ ಬೆಳೆಸುತ್ತಾರೆ. ಇಂತಹ ಗಂಡು ಮಕ್ಕಳು ಮುಂದೆ ಕೆಟ್ಟ ಜನರ ಸಂಪರ್ಕ ಬೆಳೆಸು ದುರ್ಬುದ್ಧಿಗಳನ್ನು ಕಲಿಯುತ್ತಾರೆ ಎಂದರು.
ದೇಶದಲ್ಲಿ ಮಹಿಳೆಯರಿಗೆ ಸಿಗುತ್ತಿರುವ ಭದ್ರತೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಿರಣ್ ಬೇಡಿ, ಬೇಟಿ ಬಚಾವೊ, ಬೇಟಿ ಪಡಾವೊ ಬದಲು ಹೊಸ ಘೋಷ ವಾಕ್ಯ ಬೇಟಿ ಬಚಾವೊ ಅಪ್ನಿ ಅಪ್ನಿ ಎಂದು ಬದಲಾಯಿಸಬೇಕು ಎಂದು ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos