ಆಗ್ರಾ: ಯಮುನಾ ನದಿ ನೀರಿನ ಕಲುಷಿತತೆ ಬಗ್ಗೆ ಸರ್ಕಾರದ ಗಮನ ಸೆಳಯಲು ಕಾರ್ಯಕರ್ತರ ಗುಂಪು ಸಿಲಿಂಡರ್ ಹಾಗೂ ಪೈಪುಗಳ ಮೂಲಕ ನದಿಗೆ ಆಕ್ಸಿಜನ್ ಹರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದೆ.
ಎಟ್ಮೌದುಳಾ ವೀಕ್ಷಣಾ ಪಾಯಿಂಟ್ ಪಾರ್ಕ್ ಬಳಿ ಸಿಲಿಂಡರ್ ಮತ್ತು ಪೈಪ್ ಗಳನ್ನು ಹಿಡಿದು ರಿವರ್ ಕನೆಕ್ಟ್ ಕಾರ್ಯಕರ್ತರು ಜಮಾಯಿಸಿದ್ದರು.
ಯಮುನಾ ನದಿಯಲ್ಲಿ ಶೂನ್ಯ ಆಮ್ಲಜನಕ ಮಟ್ಟವಿರುವುದರಿಂದ ಕಡಲ ಜೀವಿಗಳು ಮೃತಪಡುತ್ತವೆ. ನದಿ ನೀರು ಮಾನವನ ಬಳಕೆಗೆ ಅಯೋಗ್ಯವಾಗಿದೆ ಮತ್ತು ಬ್ಯಾಕ್ಟೀರಿಯಾಗಳು ಕೂಡ ಬದುಕಲು ಸಾಧ್ಯವಿಲ್ಲ ಎಂದು ಯಮುನಾ ನದಿ ಉಳಿಸುವಿಕೆಯ ಕಾರ್ಯಕರ್ತ ಶ್ರವಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಯಮುನಾ ನದಿ ನೀರು ಬರಡಾಗುತ್ತಿರುವುದರಿಂದ ತಾಜ್ ಮಹಲ್ ಕಟ್ಟಡದ ಅಡಿಪಾಯಕ್ಕೆ ಅಪಾಯವಾಗುತ್ತಿದೆ. ತಾಜ್ ಮಹಲ್ ನ ಬುಡ ಯಾವಾಗಲೂ ಯಮುನಾ ನದಿ ನೀರಿನಿಂದ ತೇವವಾಗಿರಬೇಕು ಎನ್ನುತ್ತಾರೆ ತಜ್ಞರು.
ಯಮುನಾ ನದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಕೊರತೆಯಿದೆ. ಇಲ್ಲಿ 1993ರ ಮೇ 21ರಂದು ನಗರ ಪಾಲಿಕೆ ನೀರನ್ನು ಕುಡಿದು 21 ಜನ ಮೃತಪಟ್ಟಿದ್ದರು.