ಕಾಶ್ಮೀರ: ಹಿಂಸಾಚಾರದ ನಡುವೆಯೂ ಸೇನಾ ಪರೀಕ್ಷೆಗೆ ಹಾಜರಾದ 1292 ಯುವಕರು
ಶ್ರೀನಗರ: ಪ್ರತ್ಯೇಕತಾವಾದಿಗಳು ಬಂದ್ ಗೆ ಕರೆ ನೀಡಿದ ಹೊರತಾಗಿಯೂ ಸೇನೆ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಸುಮಾರು 1292 ಕಾಶ್ಮೀರಿ ಯುವಕರು ಹಾಜರಾಗಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಸಬ್ಜಾರ್ ಭಟ್ ಹತ್ಯೆ ಹಿನ್ನಲೆಯಲ್ಲಿ ಕಾಶ್ಮೀರ ಕಣಿವೆಯಲ್ಲಿ ವ್ಯಾಪಕ ಪ್ರತಿಭಟನೆ ನಡೆಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಲವು ಕಡೆಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ನಡುವೆ ಪ್ರತ್ಯೇಕತಾವಾದಿಗಳು 2 ದಿನಗಳ ಬಂದ್ ಗೆ ಕರೆ ನೀಡಿದ್ದಾರೆ.
ಇದರ ಹೊರತಾಗಿಯೂ ಪಟಣ್ ಮತ್ತು ಶ್ರೀನಗದಲ್ಲಿ ನಡೆದ ಸೇನೆಯ ಸಾಮಾನ್ಯ ಪ್ರವೇಶ ಪರೀಕ್ಷೆಗೆ 1292 ಅಭ್ಯರ್ಥಿಗಳು ಹಾಜರಾಗಿದ್ದಾರೆ. ಇದು ಕಾಶ್ಮೀರಿಗರು ಬಂದ್ ಮತ್ತು ಪ್ರತಿಭಟನೆಯನ್ನೂ ಧಿಕ್ಕರಿಸಿ ತಮ್ಮ ಭವಿಷ್ಯವನ್ನು ಆಯ್ಕೆ ಮಾಡಿಕೊಂಡಿದ್ದರ ಸ್ಪಷ್ಟ ಸೂಚನೆ ಎಂದು ಅಧಿಕಾರಿಗಳು ಹರ್ಷಿಸಿದ್ದಾರೆ.
ಪರೀಕ್ಷೆ ಕುರಿತಂತೆ ಬಾರಾಮುಲ್ಲಾದಲ್ಲಿ ಪ್ರತಿಕ್ರಿಯೆ ನೀಡಿರುವ ಮೇಜರ್ ಜನರಲ್ ಎ.ಕೆ. ಸಿಂಗ್ ಅವರು, ಕಾಶ್ಮೀರಿ ಯುವಕರಿದೆ ಉದ್ಯೋಗದ ಅವಶ್ಯಕತೆಯಿದೆ. ಬಂದ್ ಹಾಗೂ ಹಿಂಸಾಚಾರದ ನಡುವೆಯೂ ನೂರಾರು ಸಂಖ್ಯೆಯಲ್ಲಿ ಯುವಕರು ಪರೀಕ್ಷೆಗೆ ಹಾಜರಾಗಿರುವುದನ್ನು ಇಂದು ನಾವು ನೋಡಬಹುದು. ಇದೇ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಾ ಹೋದರೆ, ಕಾಶ್ಮೀರಿ ಯುವಕರನ್ನು ಸರಿ ದಾರಿಗೆ ತರಬಹುದು ಎಂದು ಹೇಳಿದ್ದಾರೆ.
ಜೀವನ ಕಡೆಗೆ ಆಲೋಚನೆ ಮಾಡುವವರು ಬಂದ್ ಹಾಗೂ ಪ್ರತಿಭಟನೆಗಳಲ್ಲಿ ತೊಡಗಿಕೊಳ್ಳುವುದಿಲ್ಲ. ಇಂದು ಯುವಕರು ಪರೀಕ್ಷೆಗೆ ಹಾಜರಾಗಿರುವುದನ್ನು ನೋಡಿದರೆ, ಯುವಕರು ಪ್ರತಿಭಟನೆ, ಬಂದ್ ತಿರಸ್ಕರಿಸಿ ತಮ್ಮ ಭವಿಷ್ಯವನ್ನು ಆಯ್ಕೆ ಮಾಡಿಕೊಂಡಿದ್ದಾರೆಂಬುದನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos