ಭೂಪಾಲ್: ಹಿಂದಿ ದಿನ ಪತ್ರಿಕೆ ವರದಿಗಾರನನ್ನು ಕಚೇರಿಯಲ್ಲಿಯೇ ಗುಂಡಿಟ್ಟು ಕೊಂದಿರುವ ಘಟನೆ ಮಧ್ಯಪ್ರದೇಶದ ಪಿಪ್ಲಿಲಾ ಮಂಡಿ ಪ್ರದೇಶದಲ್ಲಿ ನಡೆದಿದೆ.
42 ವರ್ಷದ ಕಮಲೇಶ್ ಜೈನ್ ಅವರ ಕಚೇರಿಗೆ ನಿನ್ನೆ ರಾತ್ರಿ ಸುಮಾರು 8.30 ಕ್ಕೆ ಆರು ಮಂದಿ ದುಷ್ಕರ್ಮಿಗಳು ಆಗಮಿಸಿದ್ದಾರೆ. ಈ ವೇಳೆ ಕಮಲೇಶ್ ಜೈನ್ ಎದೆಗೆ ಗುಂಡು ಹಾರಿಸಲಾಗಿದೆ ಎಂದು ಪಿಪ್ಲಿಯಾ ಮಂಡಿ ಇನ್ಸ್ ಪೆಕ್ಟರ್ ಅನಿಲ್ ಸಿಂಗ್ ಠಾಗೂರ್ ಹೇಳಿದ್ದಾರೆ.
ಈ ಸಂಬಂಧ ಇಂದು ಪೊಲೀಸರು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ಇಬ್ಬರನ್ನು ಬಂಧಿಸಿದ್ದಾರೆ. ಗುಂಡು ಹಾರಿಸಿದ ನಂತರ ಇಬ್ಬರು ಆರೋಪಿಗಳು ಸ್ಥಳದಿಂದ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ಜೈನ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಪರಿಶೀಲಿಸಿದ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ತಿಳಿಸಿದರು.
ಕೊಲೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.