ದೇಶ

'ಹಿಂದೂ ಭಯೋತ್ಪಾದನೆ': ಕಮಲ್ ಹಾಸನ್ ರನ್ನು ಹಫೀಜ್ ಸಯೀದ್ ಗೆ ಹೋಲಿಸಿದ ಬಿಜೆಪಿ

Lingaraj Badiger
ನವದೆಹಲಿ: ಹಿಂದೂ ಭಯೋತ್ಪಾದನೆಯನ್ನು ತಳ್ಳಿಹಾಕುವಂತಿಲ್ಲ ಎಂದಿದ್ದ ಖ್ಯಾತ ತಮಿಳು ನಟ ಕಮಲ್ ಹಾಸನ್ ಅವರ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ, ಅವರನ್ನು ಲಷ್ಕರ್- ಇ- ತೋಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಗೆ ಹೋಲಿಸಿದೆ.
ಇಂದು ಕಮಲ್ ಹಾಸನ್ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹರಾವ್ ಅವರು, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಹಲವು ದಶಕಗಳಿಂದ ಮುಸ್ಲಿಂ ಮತಕ್ಕಾಗಿ ಭಾರತೀಯ ಸಮಾಜ ಮತ್ತು ಹಿಂದೂ ಸಮುದಾಯವನ್ನು ದರ್ಬಳಕೆ ಮಾಡಿಕೊಂಡು ಬಂದಿದ್ದಾರೆ ಎಂದು ಆರೋಪಿಸಿದರು.
ಹಿರಿಯ ಕಾಂಗ್ರೆಸ್ ನಾಯಕರಾದ ಪಿ.ಚಿದಂಬರಂ ಹಾಗೂ ಸುಶೀಲ್ ಕುಮಾರ್ ಶಿಂಧೆ ಅವರು ಸಂಸತ್ತಿನಲ್ಲೇ ದೇಶದಲ್ಲಿ ಹಿಂದೂ ಭಯೋತ್ಪಾದನೆ ಇದೆ ಎಂದು ಹೇಳಿದ್ದರು. ಈಗ ಅವರ ಸಾಲಿಗೆ ಕಮಲ್ ಹಾಸನ್ ಅವರು ಸೇರಿದ್ದಾರೆ. ಪಿ.ಚಿದಂಬರಂ, ಕಮಲ್ ಹಾಸನ್ ಹಾಗೂ ಹಫೀಜ್ ಸಯೀದ್ ಎಲ್ಲಾ ಒಂದೇ. ಈ ಎಲ್ಲಾ ಜನ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ನರಸಿಂಹರಾವ್ ಅವರು ವಾಗ್ದಾಳಿ ನಡೆಸಿದ್ದಾರೆ.
ಕಮಲ್ ಹಾಸನ್ ಅವರು ಕೇರಳದ ಎಲ್ ಡಿಎಫ್ ನೊಂದಿಗೆ ಕೈಜೋಡಿಸಿದ್ದು, ತಮಿಳುನಾಡು ಜನ ಇಂತಹ ಕೀಳು ಮಟ್ಟದ ರಾಜಕಾರಣವನ್ನು ತಿರಸ್ಕರಿಸಲಿದ್ದಾರೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
ಕೇರಳದಲ್ಲಿನ ಹಿಂಸಾಚಾರಕ್ಕೆ ಹಿಂದೂ ಭಯೋತ್ಪಾದನೆಯೇ ಕಾರಣ.  ಬಲಪಂಥೀಯ ವರ್ಗ ಕೋಮುವಾದವನ್ನು ಹರಡುತ್ತಿದೆ. ಕೇರಳದ ಇಂದಿನ ಸ್ಥಿತಿಗೆ ಇದೇ ಕಾರಣ ಎಂದು ಕಮಲ್ ತಮಿಳು ಪತ್ರಿಕೆಯಲ್ಲಿ ಅಂಕಣ ಬರೆದಿದ್ದಾರೆ.
SCROLL FOR NEXT