ವರ್ಲ್ಡ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ನವದೆಹಲಿ: ಭಾರತದಲ್ಲಿ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರಲ್ಲಿ ಶೇಕಡಾ 90ರಷ್ಟು ಜನರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಸಿಗುವುದಿಲ್ಲ. ಮುಂದಿನ ದಿನಗಳಲ್ಲಿ ಸಂಭಾವ್ಯ ಮಾನಸಿಕ ಆರೋಗ್ಯದ ಸಾಂಕ್ರಾಮಿಕ ರೋಗವನ್ನು ಎದುರಿಸಬೇಕಾಗಬಹುದು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಎಚ್ಚರಿಕೆ ನೀಡಿದ್ದಾರೆ.
ಅವರು ನಿನ್ನೆ ದೆಹಲಿಯಲ್ಲಿ ಮಾನಸಿಕ ಆರೋಗ್ಯದ ವಿಶ್ವ ಕಾಂಗ್ರೆಸ್ ಉದ್ಘಾಟಿಸಿ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶವನ್ನು ಉಲ್ಲೇಖಿಸಿ ಜಾಗತಿಕ ಮಟ್ಟದಲ್ಲಿ ಭಾರತದಲ್ಲಿ ಅತಿ ಹೆಚ್ಚು ಮಂದಿ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.
2016ರ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆ ಪ್ರಕಾರ ಭಾರತದ ಜನಸಂಖ್ಯೆಯ ಶೇಕಡಾ 14ರಷ್ಟು ಜನರಿಗೆ ಮಾನಸಿಕ ಆರೋಗ್ಯದ ಚಿಕಿತ್ಸೆಯ ನೆರವು ಬೇಕಾಗಿದೆ. ಶೇಕಡಾ 2ರಷ್ಟು ಜನರು ತೀವ್ರ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮಾನಸಿಕ ಕಾಯಿಲೆಗೊಳಗಾದ ಸುಮಾರು 200 ಮಂದಿ ಭಾರತೀಯರು ಪ್ರತಿವರ್ಷ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಆತ್ಮಹತ್ಯೆಗೆ ಪ್ರಯತ್ನಿಸುವವರ ಸಂಖ್ಯೆ ಇನ್ನೂ ಅಧಿಕವಾಗಿದೆ ಎಂದರು.
ಇದು ಆತಂಕಪಡುವ ಅಂಕಿಅಂಶವಾಗಿದೆ. ಮಹಾನಗರ ಪಾಲಿಕೆಗಳಲ್ಲಿ ವಾಸಿಸುತ್ತಿರುವ ಮತ್ತು ಯುವ ವಯಸ್ಸಿನವರು, ಮಕ್ಕಳು, ಹದಿಹರೆಯದವರು ಮಾನಸಿಕ ಕಾಯಿಲೆಗೀಡಾಗುವುದು ಕಳವಳಕಾರಿ ಸಂಗತಿಯಾಗಿದೆ. ಭಾರತದಲ್ಲಿ ಶೇಕಡಾ 65ರಷ್ಟು ಜನರು 35 ವರ್ಷಕ್ಕಿಂತ ಒಳಗಿನವರಾಗಿದ್ದು ಇಂತವರು ಮಾನಸಿಕ ಕಾಯಿಲೆಗೀಡಾಗುವುದು ಖೇದಕರ ವಿಚಾರ ಎಂದು ರಾಷ್ಟ್ರಪತಿ ಬೇಸರ ವ್ಯಕ್ತಪಡಿಸಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos