ಭುವನೇಶ್ವರ: ಸರ್ಕಾರದ ಯೋಜನೆ ಅನ್ವಯ ಸೂರು ಕೇಳಿದ್ದ ವ್ಯಕ್ತಿ ಇದೀಗ ತನ್ನ ಶೌಚಾಲಯವನ್ನೇ ಮನೆ ಮಾಡಿಕೊಂಡು ಜೀವಿಸುತ್ತಿರುವ ಸುದ್ದಿ ಒಡಿಶಾದಿಂದ ಕೇಳಿಬಂದಿದೆ.
ಒಡಿಶಾದ ಜಲಾಡದ ಚೋಟು ರೌಟಿಯಾ ಎಂಬಾತ ತನಗೆ ಸರ್ಕಾರ ಕಟ್ಟಿಸಿಕೊಟ್ಟ ಶೌಚಾಲಯವನ್ನೇ ಮನೆಯನ್ನಾಗಿಸಿಕೊಂಡು ಜೀವಿಸುತ್ತಿದ್ದು, ಸರ್ಕಾರ ನೀಡಿದ ಶೌಚಾಲಯದ ಹೊರತಾಗಿಯೂ ಶೌಚಕ್ಕಾಗಿ ಮತ್ತೆ ಬಯಲನ್ನೇ ಆಶ್ರಯಿಸಿದ್ದಾನೆ. ಮೂಲಗಳ ಪ್ರಕಾರ ಚೋಟು ರೌಟೀಯಾ ರೂರ್ಕೆಲಾ ಉಕ್ಕಿನ ಕೇಂದ್ರ ನಿರ್ಮಾಣದ ಸಮಯದಲ್ಲಿ ತಮ್ಮ ತಂದೆ ಕಟ್ಟಿಸಿಕೊಟ್ಟಿದ್ದ ಸ್ವಂತ ಮನೆಯನ್ನು ಕಳೆದುಕೊಂಡಿದ್ದರು. ಹೀಗಾಗಿ ಸ್ವಂತ ಮನೆಗಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಅರ್ಜಿ ಹಾಕಿದ್ದರು.
ಅದರಂತೆ ಹಲವು ಸ್ಥಳೀಯ ಮುಖಂಡರನ್ನು, ಅಧಿಕಾರಿಗಳನ್ನು ಭೇಟಿಯಾಗಿ ಮನೆಗಾಗಿ ಮನವಿ ಮಾಡಿಕೊಂದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಇವರ ಸಮಸ್ಯೆಯನ್ನು ಆಲಿಸಿದ್ದ ಸ್ಥಳೀಯ ಅಧಿಕಾರಿಗಳು ಇವರ ಸಮಸ್ಯೆ ಪರಿಶೀಲಿಸಿದ್ದರಾದರೂ ಅವರಿಗೆ ಆವಾಸ್ ಯೋಜನೆ ಅಡಿಯಲ್ಲಿ ಮನೆ ನೀಡುವ ಅಧಿಕಾರ ಇರಲಿಲ್ಲ. ಹೀಗಾಗಿ ಚೋಟು ರೌಟೀಯಾ ಅವರಿಗೆ ಸ್ವಚ್ಛಭಾರತ ಯೋಜನೆಯಡಿಯಲ್ಲಿ ಶೌಚಾಲಯ ನಿರ್ಮಿಸಿಕೊಟ್ಟಿದ್ದಾರೆ. ಶೌಚಾಲಯವೇ ಮನೆಯಾದ ಕಾರಣ ರೌಟೀಯಾ ಶೌಚಕ್ಕಾಗಿ ಮತ್ತೆ ಬಯಲನ್ನು ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ.
50 ವರ್ಷದ ಚೋಟು ರೌಟೀಯಾ ಅವರ ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚೋಟು ರೌಟೀಯಾ ಅವರಿಗೆ ಮನೆ ನಿರ್ಮಿಸಿಕೊಡಬೇಕು ಎಂಬ ಆಗ್ರಹಗಳು ಕೇಳಿಬರುತ್ತಿದೆ.