ನವದೆಹಲಿ: ಏಕರೂಪದ ತೆರಿಗೆ ನೀತಿ ಜಿಎಸ್ ಟಿಯಲ್ಲಿ ರಚನಾತ್ಮಕ ಸುಧಾರಣೆಗಳು ಅನಿವಾರ್ಯ ಎಂದು ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ನಾಲ್ಕನೇ ಬಾರಿಗೆ ಗುಜರಾತ್ ನಲ್ಲಿ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ ಇಂದು ಗಾಂಧಿನಗರದಲ್ಲಿ ಬೆಂಬಲಿಗರನ್ನು ಉದ್ದೇಶಿಸಿತ ಮಾತನಾಡಿದರು. ಈ ವೇಳೆ ಜಿಎಸ್ ಟಿ ತೆರಿಗೆ ವ್ಯಾಪ್ತಿಯ ಶೇ.28ರ ವ್ಯಾಪ್ತಿಯಿಂದ 211 ಅಗತ್ಯ ವಸ್ತುಗಳನ್ನು ಶೇ.18ರ ವ್ಯಾಪ್ತಿಗೆ ತರಲಾಗಿದೆ. ಇದು ಕಾಂಗ್ರೆಸ್ ಪಕ್ಷ ಸತತ ಹೋರಾಟ ಮತ್ತು ಒತ್ತಡದ ಫಲವಾಗಿದೆ ಎಂದು ಹೇಳಿದರು. ಅಂತೆಯೇ ಕೇವಲ ತೆರಿಗೆ ಕಡಿತಗೊಳಿಸಿದರೆ ಮಾತ್ರ ಹಳಿ ತಪ್ಪಿರುವ ಆರ್ಥ ವ್ಯವಸ್ಥೆ ದಾರಿಗೆ ಬರುವುದಿಲ್ಲ. ದೇಶದಲ್ಲಿ 5 ಬಗೆಯ ತೆರಿಗೆಗಳ ಬದಲಿಗೆ ದೇಶಾದ್ಯಂತ ಏಕರೂಪದ ತೆರಿಗೆ ನೀತಿ ಜಾರಿಯಾಗಬೇಕು. ಇದಕ್ಕಾಗಿ ಜಿಎಸ್ ಟಿಯಲ್ಲಿ ರಚನಾತ್ಮಕ ಸುಧಾರಣೆಗಳನ್ನು ತರಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.
ಅಂತೆಯೇ ಸರ್ಕಾರದ ಅವೈಜ್ಞಾನಿಕ ತೆರಿಗೆ ನೀತಿ ವಿರುದ್ಧದ ತಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದ ರಾಹುಲ್ ಗಾಂಧಿ, ಸರ್ಕಾರದ ಜಿಎಸ್ ಟಿ ಜಾರಿ ಪ್ರಕ್ರಿಯೆಯೇ ಸರಿಯಾಗಿರಲಿಲ್ಲ. ಜಿಎಸ್ ಟಿ ಜಾರಿ ಕುರಿತ ಸರ್ಕಾರದ ನಿರ್ಧಾರ ಸರಿ ಇರಲಿಲ್ಲ. ಬಹುಶಃ ಪ್ರಧಾನಿ ಮೋದಿಗೆ ಅವರ ತಪ್ಪು ಈಗ ಅರಿವಾದಂತಿದೆ ಎಂದು ಹೇಳಿದರು.