ಪಾಟ್ನ: 15 ಕೋಟಿ ಮೊತ್ತದ ಶೌಚಾಲಯ ನಿರ್ಮಾಣ ಹಗರಣದಲ್ಲಿ ಇನ್ನೂ ಎರಡು ಎನ್ ಜಿಒ ಗಳು ಶಾಮೀಲಾಗಿರುವುದನ್ನು ವಿಶೇಷ ತನಿಖಾ ದಳ ಪತ್ತೆ ಮಾಡಿದೆ.
ಕೇವಲ ಪಾಟ್ನಾದಲ್ಲಷ್ಟೇ ಅಲ್ಲದೇ ಇನ್ನೂ ಎರಡು ಜಿಲ್ಲೆಗಳಲ್ಲಿ ಈ ಹಗರಣ ನಡೆದಿರುವ ಸಾಧ್ಯತೆಗಳನ್ನು ಎಸ್ ಐಟಿ ಶಂಕಿಸಿದೆ. ಆರ್ಯಭಟ್ ವಿಕಾಸ್ ಸೇವಾ ಸಂಸ್ಥಾನ್ ಹಾಗೂ ಬುದ್ಧ ಉತ್ಥಾನ್ ಗ್ರಾಮೀಣ್ ಸಮಿತಿ ಪರಿವರ್ತನ ಸಂಸ್ಥಾನ ಎಂಬ ಎನ್ ಜಿಒ ಗಳು ಹಗರಣದಲ್ಲಿ ಶಾಮೀಲಾಗಿದೆ ಎಂದು ಎಸ್ ಐ ಟಿ ತಿಳಿಸಿದೆ.
ಬ್ಯಾಂಕ್ ನ ಹಲವು ಅಧಿಕಾರಿಗಳ ತಂತ್ರದಿಂದಾಗಿ ಹಗರಣ ನಡೆದಿದ್ದು, ಈ ವರೆಗೂ ಹಗರಣದಲ್ಲಿ ಒಟ್ಟು 6 ಎನ್ ಜಿಒ ಗಳು ಶಾಮೀಲಾಗಿ ಶೌಚಾಲಯ ನಿರ್ಮಾಣಕ್ಕಾಗಿ ಮೀಸಲಾಗಿದ್ದ ಸರ್ಕಾರಿ ಅನುದಾನವನ್ನು ಕಬಳಿಸಿರುವುದು ಬೆಳಕಿಗೆ ಬಂದಿದೆ.
ಎನ್ ಜಿಒ ಗಳು ಹಗರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಎನ್ ಜಿಒ ಗಳ ಬ್ಯಾಂಕ್ ಖಾತೆಯಲ್ಲಿ ಯಾವುದೇ ವಹಿವಾಟು ನಡೆಯದಂತೆ ಎಚ್ಚರ ವಹಿಸಲು ಎಸ್ಐಟಿ ಸೂಚನೆ ನೀಡಿದೆ. ಪಾಟ್ನಾದ ಮಾದರಿಯಲ್ಲೇ ಭೋಜ್ ಪುರದಲ್ಲಿಯೂ ಹಗರಣ ನಡೆದಿರುವ ಸಾಧ್ಯತೆಗಳು ಕಂಡುಬಂದಿದ್ದು, ಎಸ್ಐಟಿ ತಂಡ ತನಿಖೆಯನ್ನು ಮುಂದುವರೆಸಿವೆ.