ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ (ಸಂಗ್ರಹ ಚಿತ್ರ)
ಚಂಡೀಘಡ: ರಾಬರ್ಟ್ ವಾದ್ರಾ ಪ್ರಕರಣ ಸಂಬಂಧ ದೇಶದಲ್ಲಿ ಸಂಚಲನ ಸೃಷ್ಟಿ ಮಾಡಿದ್ದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಮತ್ತೆ ಸುದ್ದಿಗೆ ಬಂದಿದ್ದು, ಈ ಬಾರಿಯೂ ತಮ್ಮ ವರ್ಗಾವಣೆ ಮೂಲಕ ಸುದ್ದಿಯಾಗಿದ್ದಾರೆ.
ಈ ಹಿಂದೆ ರಾಬಾರ್ಟ್ ವಾದ್ರಾ ಭೂ ಖರೀದಿ ವ್ಯವಹಾರ ಸಂಬಂಧ ಸುದ್ದಿಯಲ್ಲಿದ್ದ ಖೇಮ್ಕಾ ಇದೀಗ ಬಿಜೆಪಿ ಸರ್ಕಾರದ ಅವಧಿಯಲ್ಲೂ ಮತ್ತೊಮ್ಮೆ ವರ್ಗಾವಣೆ ಮೂಲಕ ಸುದ್ದಿಯಲ್ಲಿದ್ದಾರೆ. ಅಶೋಕ್ ಖೇಮ್ಕಾ ಅವರನ್ನು ಹರ್ಯಾಣ ಮನೋಹರಲ್ ಲಾಲ್ ಖಟ್ಟರ್ ಸರ್ಕಾರ ವರ್ಗಾವಣೆ ಮಾಡಿದ್ದು, ಖೇಮ್ಕಾ ಹರ್ಯಾಣ ಕ್ರೀಡಾ ಸಚಿವ ಅನಿಲ್ ವಿಜ್ ಅವರ ಕೈಕೆಳಗೆ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಮುಖ್ಯ ಕಾರ್ಯದರ್ಶಿಯಾಗಲಿದ್ದಾರೆ. ಖೇಮ್ಕಾ ತಮ್ಮ 23 ವರ್ಷಗಳ ಅವಧಿಯಲ್ಲಿ 45 ಬಾರಿ ವರ್ಗಾವಣೆಯಾಗಿದ್ದರು. ಇದು ಅವರಿಗೆ 46ನೇ ವರ್ಗಾವಣೆಯಾಗಿದೆ.
ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಖೇಮ್ಕಾ, "ಎಷ್ಟೊಂದು ಕೆಲಸಗಳನ್ನು ಯೋಜಿಸಲಾಗಿತ್ತು. ಈಗ ಇನ್ನೊಂದು ವರ್ಗಾವಣೆಯ ಸುದ್ದಿ. ಮತ್ತೊಮ್ಮೆ ಕ್ರ್ಯಾಶ್ ಲ್ಯಾಂಡಿಂಗ್. ಸ್ಥಾಪಿತ ಹಿತಾಸಕ್ತಿಗಳು ಗೆದ್ದಿವೆ. ಆದರೆ ಇದು ತಾತ್ಕಾಲಿಕ. ಮತ್ತೊಮ್ಮೆ ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡುತ್ತೇನೆ'' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಹರ್ಯಾಣ ಮುಖ್ಯಮಂತ್ರಿ ಅವರ ವೈಯಕ್ತಿಕ ಸಿಬ್ಬಂದಿಗೆ ದೀಪಾವಳಿಯ ವಿಶೇಷ ಬೋನಸ್ ನೀಡಿದ್ದನ್ನು ಖೇಮ್ಕಾ ಈ ಹಿಂದೆ ಟೀಕಿಸಿ ಸುದ್ದಿಯಾಗಿದ್ದರು. ಅಕ್ಟೋಬರ್ ತಿಂಗಳಲ್ಲಿ ಸಾಮಾಜಿಕ ನ್ಯಾಯ ಮತ್ತು ಮಹಿಳಾ ಸಬಲೀಕರಣ ಇಲಾಖೆಯಲ್ಲಿದ್ದಾಗ ಅವರು ತಮ್ಮ ಇಲಾಖೆಯ ಸಚಿವ ಕೃಷ್ಣಾ ಬೇಡಿ ಅವರನ್ನು ಟೀಕಿಸುವ ಮೂಲಕ ಮತ್ತೆ ಸುದ್ದೆಗೆ ಬಂದರು. ಸಚಿವರು ಇಲಾಖೆಯ ವಾಹನ ದುರುಪಯೋಗ ಪಡಿಸಿದ್ದರೆಂದು ಖೇಮ್ಕಾ ದೂರಿದ್ದರು.
ಇದೇ ಕಾರಣಕ್ಕೆ ಸಚಿವ ಬೇಡಿ ಅಸಮಾಧಾನಗೊಂಡಿದ್ದರು. ಹೀಗಾಗಿ ಖೇಮ್ಕಾ ಅವರನ್ನು ಮತ್ತೊಮ್ಮೆ ಹರ್ಯಾಣ ಸರ್ಕಾರ ವರ್ಗಾವಣೆ ಮಾಡಿದೆ ಎಂದು ಹೇಳಲಾಗುತ್ತಿದೆ.
ವರ್ಗಾವಣೆ ದಾಖಲೆಯಲ್ಲಿ ಖೇಮ್ಕಾಗೆ 2ನೇ ಸ್ಥಾನ
ಇನ್ನು ದೇಶದಲ್ಲಿ ಅತೀ ಹೆಚ್ಚು ಬಾರಿ ವರ್ಗಾವಣೆಯಾದ ಅಧಿಕಾರಿಗಳ ಪಟ್ಟಿಯಲ್ಲಿ ಖೇಮ್ಕಾ 2ನೇ ಸ್ಥಾನದಲ್ಲಿದ್ದು, ಹರ್ಯಾಣದ ಮತ್ತೋರ್ವ ಅಧಿಕಾರಿ ಪ್ರದೀಪ್ ಕಸಂಜ್ ಈ ವರೆಗೂ ಬರೊಬ್ಬರಿ 68 ಬಾರಿ ವರ್ಗಾವಣೆಗೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos