ನವದೆಹಲಿ: ಹಸಿರು ನ್ಯಾಯಾಧಿಕರಣದ ವಿರೋಧದ ನಡುವೆಯೂ ಸಮ-ಬೆಸ ನೀತಿಯಲ್ಲಿ ವಿನಾಯಿತಿ ಕೇಳಿದ್ದ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಕೊನೆಗೂ ತನ್ನ ವಿನಾಯಿತಿ ಅರ್ಜಿಯನ್ನು ಮಂಗಳವಾರ ವಾಪಸ್ ಪಡೆದಿದೆ.
ಈ ಹಿಂದೆ ಮಹಿಳೆಯರಿಗೆ ಮತ್ತು ದೆಹಲಿ ಜನಪ್ರತಿನಿಧಿಗಳಿಗೆ ಸಮ-ಬೆಸ ನೀತಿಯಲ್ಲಿ ವಿನಾಯಿತಿ ನೀಡುವಂತೆ ಕೋರಿ ದೆಹಲಿ ಸರ್ಕಾರ ಹಸಿರು ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಕೆ ಮಾಡಿತ್ತು. ದೆಹಲಿ ಸರ್ಕಾರದ ಅರ್ಜಿ ಸಲ್ಲಿಕೆಯಾಗುತ್ತಿದ್ದಂತೆಯೇ ಈ ಬಗ್ಗೆ ತನ್ನ ಸ್ಪಷ್ಟ ನಿಲುವು ಪ್ರಕಟಿಸಿದ್ದ ಎನ್ ಜಿಟಿ, ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ತಾರ್ಕಿಕ ವಿವರಣೆಯನ್ನೂ ಕೂಡ ನೀಡಬೇಕು ಎಂದು ಹೇಳಿತ್ತು, ಅಲ್ಲದೆ ದ್ವಿಚಕ್ರ ವಾಹನಗಳಿಗೂ ವಿನಾಯಿತಿ ನೀಡುವಂತೆ ಕೋರಿದ್ದ ದೆಹಲಿ ಸರ್ಕಾರದ ಕ್ರಮವನ್ನು ಖಂಡಿಸಿದ್ದ ಎನ್ ಜಿಟಿ, ವರದಿಗಳ ಅನ್ವಯ ಕಾರುಗಳಿಗಿಂತ ದ್ವಿಚಕ್ರ ವಾಹಹನಗಳೇ ವಾತಾವರಣವನ್ನು ಹೆಚ್ಚಾಗಿ ಕಲುಷಿತಗೊಳಿಸುತ್ತಿದೆ. ಹೀಗಿರುವಾಗ ದ್ವಿಚಕ್ರ ವಾಹನಗಳಿಗೂ ವಿನಾಯಿತಿ ಕೇಳಿರುವ ಸರ್ಕಾರದ ಉದ್ದೇಶವೇನು ಎಂದು ಪ್ರಶ್ನಿಸಿತ್ತು.
ಅಂತೆಯೇ ಮಹಿಳೆಯರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎನ್ ಜಿಟಿ, ಮಹಿಳೆಯರಿಗಾಗಿ ದೆಹಲಿ ಸರ್ಕಾರವೇಕೆ ವಿಶೇಷ ಬಸ್ ಗಳ ವ್ಯವಸ್ಥೆ ಮಾಡಬಾರದು..ನಿಮ್ಮ ಅವೈಜ್ಞಾನಿಕ ನಿರ್ಧಾರಗಳಿಂದ ದೆಹಲಿ ಮಕ್ಕಳ ಭವಿಷ್ಯ ಅಂಧಕಾರದಲ್ಲಿರುವಂತೆ ಮಾಡಬೇಡಿ..ಮುಂದಿನ ಪೀಳಿಗೆಯ ಮಕ್ಕಳು ವಾಯು ಮಾಲೀನ್ಯದಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲಬೇಕೇ ಎಂದು ಪ್ರಶ್ನಿಸಿತ್ತು.
ಈ ಬೆಳವಣಿಗೆ ಬೆನ್ನಲ್ಲೇ ದೆಹಲಿ ಸರ್ಕಾರ ಇದೀಗ ತನ್ನ ಅರ್ಜಿಯನ್ನು ವಾಪಸ್ ಪಡೆದಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos