ಪಣಜಿ: ಮಾಜಿ ರಕ್ಷಣಾ ಸಚಿವ, ಹಾಲಿ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ತನ್ನ ತಾರುಣ್ಯದ ದಿನಗಳಲ್ಲಿ ವಯಸ್ಕರ ಚಿತ್ರವನ್ನು ನೋಡುವಾಗ ನೆರೆಮನೆಯವನ ಕೈಲಿ ಸಿಕ್ಕಿಬಿದ್ದಿದ್ದೆ ಎಂದು ಹೇಳಿದ್ದಾರೆ.
ಮಕ್ಕಳ ದಿನಾಚರಣೆ ಹಿನ್ನೆಲೆ ಪಣಜಿಯಲ್ಲಿ ಶಾಲಾ ಮಕ್ಕಳೊಂದಿಗೆ ಮಾತನಾಡಿದ ಪರಿಕ್ಕರ್ ಅವರು ಪ್ರಸ್ತುತ ನೀವೀಗ ಮನೆಗಳಲ್ಲಿ ಟಿವಿಯಲ್ಲಿ ಏನು ನೋಡುತ್ತಿದ್ದಿರೋ ಅದು ನನ್ನ ತಾರುಣ್ಯದ ಕಾಲದಲ್ಲಿ ವಯಸ್ಕರ ಚಿತ್ರವಾಗಿತ್ತು. ಆ ಕಾಲದಲ್ಲಿ ವಯಸ್ಕರ ಚಿತ್ರಗಳನ್ನು ಚಿತ್ರಮಂದಿರದಲ್ಲಿ ನೋಡಬೇಕಿತ್ತು.
ಹೀಗೆ ಒಂದು ಸಲ ನಾನು ಮತ್ತು ನನ್ನ ಸಹೋದರ ವಯಸ್ಕರ ಚಿತ್ರ ನೋಡಲೆಂದು ಚಿತ್ರಮಂದಿರಕ್ಕೆ ತೆರಳಿದ್ದೇವು. ಚಿತ್ರದ ಮಧ್ಯಂತರದಲ್ಲಿ ಲೈಟ್ ಹಾಕಿದಾಗ ನಮ್ಮ ಸೀಟ್ ಪಕ್ಕದಲ್ಲೇ ನೆರೆಮನೆಯ ವ್ಯಕ್ತಿಯೊಬ್ಬ ಪ್ರತ್ಯಕ್ಷವಾಗಿದ್ದ. ಈ ವ್ಯಕ್ತಿ ಪ್ರತಿ ದಿನ ನನ್ನ ತಾಯಿಯನ್ನು ಮಾತನಾಡಿಸಿಕೊಂಡೇ ಹೋಗುತ್ತಿದ್ದ. ಆತನನ್ನು ನೋಡಿ ನಾನು, ನನ್ನ ಸಹೋದರನ ಬಳಿ ನಾವಿಂದು ಸತ್ತೆವು ಎಂದಿದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿ ಸಭೆಯನ್ನು ನಗೆಗಡಲಲ್ಲಿ ತೇಲಿಸಿದರು.
ಆ ಕೂಡಲೇ ನಾನು ನನ್ನ ಸಹೋದರ ಚಿತ್ರಮಂದಿರದಿಂದ ಹೊರಗೆ ಬಂದು ಮನೆಗೆ ಹೋಗಿ ಅಮ್ಮನ ಬಳಿ ನಾವು ಇವತ್ತು ಸಿನಿಮಾಗೆ ಹೋಗಿದ್ದೇವು. ಆದರೆ ನಮಗೆ ಅಲ್ಲಿ ಹೋದ ಬಳಿಕ ಆ ಚಿತ್ರ ಅಸಹ್ಯ ಎಂದು ತಿಳಿದು ಅರ್ಧದಲ್ಲೇ ವಾಪಸ್ ಬಂದೆವು ಎಂದು ಹೇಳಿದ್ದರಂತೆ.
ಮರು ದಿನ ಆ ವ್ಯಕ್ತಿ ನಮ್ಮ ಮನೆಗೆ ಬಂದು ಅಮ್ಮನ ಬಳಿ ನಿಮ್ಮ ಮಕ್ಕಳು ಚಿತ್ರ ನೋಡಲು ತೆರಳಿದ್ದರು ಎಂದು ಚಾಡಿ ಹೇಳಿದ. ಅದಕ್ಕೆ ನಮ್ಮ ತಾಯಿ ಪ್ರತಿಕ್ರಿಯಿಸಿ ನನಗೆ ಗೊತ್ತು ನನ್ನ ಮಕ್ಕಳು ಹೋಗಿ ವಾಪಸ್ ಬಂದಿದ್ದು, ನೀನೇಕೆ ಆ ಚಿತ್ರ ನೋಡಲು ಹೋಗಿದ್ದೆ ಎಂದು ಆತನಿಗೆ ಮರು ಪ್ರಶ್ನೆ ಹಾಕಿದ್ದರು ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos