ನವದೆಹಲಿ: ಉಪಗ್ರಹ ಚಿತ್ರಗಳ ಮೂಲಕ ಕಡಲತೀರದ ಪ್ರದೇಶಗಳಲ್ಲಿ ಸಂಚರಿಸುವ ಅನುಮಾನಾಸ್ಪದ ಹಡಗುಗಳ ಮೇಲೆ ಇಸ್ರೋ ಕಣ್ಣಿಡಲಿದ್ದು, ದೇಶದ ಕಡಲ ತೀರದ ಭದ್ರತೆಗೆ ಸಹಕಾರಿಯಾಗಲಿದೆ ಎಂದು ಗೃಹ ಇಲಾಖೆ ತಿಳಿಸಿದೆ.
ಇಸ್ರೋದ ಉಪಗ್ರಹ ಚಿತ್ರಣಗಳ ಕಣ್ಗಾವಲು ಕರಾವಳಿ ಪ್ರದೇಶದ ಭದ್ರತೆಗೆ ಪೂರಕವಾಗಿದ್ದು, ಮುಂದಿನ ವರ್ಷದ ಮಾರ್ಚ್ ವೇಳೆಗೆ 1,000 ಟ್ರಾನ್ಸ್ಪಾಂಡರ್ಸ್ ನ್ನು ಇಸ್ರೋ ನೀಡಲಿದೆ.
ಮುಂಬೈ ದಾಳಿಯಂತಹ ಉಗ್ರ ದಾಳಿಗಳನ್ನು ತಡೆಗಟ್ಟಲು ಇಸ್ರೋದ ಉಪಗ್ರಹ ಚಿತ್ರಗಳ ಕಣ್ಗಾವಲು ಸಹಕಾರಿಯಾಗಲಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈ ಉಗ್ರ ದಾಳಿಯ ಬಳಿಕ ಭಾರತ ಸರ್ಕಾರ ಕಡಲತೀರ ಪ್ರದೇಶದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಈ ವರೆಗೂ 19.47 ಲಕ್ಷ ಮೀನುಗಾರರು ಬಯೋಮೆಟ್ರಿಕ್ ಗುರುತಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. 18.60 ಲಕ್ಷ ಮೀನುಗಾರರಿಗೆ ಐಡಿ ಕಾರ್ಡ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
20 ಮೀಟರ್ ಗಳಿಗಿಂತ ಹೆಚ್ಚಿರುವ ಬೋಟ್ ಗಳಿಗೆ ಸ್ವಯಂಚಾಲಿತ ಗುರುತಿನ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಅಷ್ಟೇ ಅಲ್ಲದೇ ಕಲರ್ ಕೋಡಿಂಗ್ ಸಹ ನೀಡಲಾಗುತ್ತದೆ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.