ದೇಶ

ಕಾಂಬೋಡಿಯಾದಲ್ಲಿ ಸೈನೈಡ್ ಸೇವಿಸಿ ದಕ್ಷಿಣ ಭಾರತದ ಗ್ಯಾಂಗ್ ಸ್ಟರ್ 'ದಾವೂದ್' ಆತ್ಮಹತ್ಯೆ!

Srinivasamurthy VN
ಚೆನ್ನೈ: ಕಾಂಬೋಡಿಯಾ ದೇಶದಲ್ಲಿ ದಕ್ಷಿಣ ಭಾರತದ ಕುಖ್ಯಾತ ಗ್ಯಾಂಗ್ ಸ್ಟರ್ 'ದಾವೂದ್' ಸೈನೈಡ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ದಕ್ಷಿಣ ಭಾರತದ ದಾವೂದ್ ಎಂದೇ ಕುಖ್ಯಾತಿ ಪಡೆದಿದ್ದ ಗ್ಯಾಂಗ್ ಸ್ಟರ್ ಶ್ರೀಧರ್ ಧನಪಾಲನ್ ಸೈನೈಡ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ. ಸುದ್ದಿಸಂಸ್ಥೆಯೊಂದು ವರದಿ ಮಾಡಿರುವಂತೆ  ಕೌಟುಂಬಿಕ ಕಾರಣಗಳಿಂದಾಗಿ ಶ್ರೀಧರ್ ಕಾಂಬೋಡಿಯಾದಲ್ಲಿ ಸೈನೆಡ್ ತಿಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. 44ರ ಹರೆಯದ ಧನಪಾಲನ್ ಕೌಟುಂಬಿಕ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗಿದ್ದು, ಕೂಡಲೇ ಆತನನ್ನು  ಕಾಂಬೋಡಿಯಾದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.

ಮೂಲತಃ ತಮಿಳುನಾಡಿನ ಕಾಂಚಿಪುರಂ ನಿವಾಸಿಯಾಗಿದ್ದ ಧನಪಾಲನ್ ವಿರುದ್ಧ ಏಳು ಕೊಲೆ ಸೇರಿದಂತೆ 43 ಪ್ರಕರಣಗಳು ದಾಖಲಾಗಿತ್ತು. ಈತ 2013ರಲ್ಲಿ ಕಾಂಬೋಡಿಯಾಕ್ಕೆ ಪರಾರಿಯಾಗಿದ್ದ. ಆತನನ್ನು ಪತ್ತೆಹಚ್ಚುವಲ್ಲಿ  ತಮಿಳುನಾಡು ಪೊಲೀಸರು ವಿಫಲರಾಗಿದ್ದರು. ಈತ ದಕ್ಷಿಣದ ದಾವೂದ್ ಇಬ್ರಾಹಿಂ ಎಂದೇ ಕುಖ್ಯಾತಿ ಪಡೆದಿದ್ದ. ಕಾಂಚೀಪುರಂನಲ್ಲಿನ ಎಲ್ಲಿಯಪ್ಪನ್ ಸ್ಟ್ರೀಟ್ ಪ್ರದೇಶದಲ್ಲಿ ಈತನ ಮನೆ ಇದ್ದು, ಆತನ ಮಗಳು ಮತ್ತು ಪತ್ನಿ  ಕಾಂಚೀಪುರಂನ ನಿವಾಸದಲ್ಲಿ ವಾಸವಾಗಿದ್ದಾರೆ. ಅಂತೆಯೇ ಧನಪಾಲನ್ ಮಗ ಲಂಡನ್ ನಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಪ್ರಸ್ತುತ ಈ ರಸ್ತೆಗೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋ ಬಸ್ತ್  ವ್ಯವಸ್ಥೆ ಕಲ್ಪಿಸಲಾಗಿದೆ.
SCROLL FOR NEXT