ನವದೆಹಲಿ: ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳಿಗೆ ನೇಣು ಹಾಕುವ ಬದಲು ಬೇರೆ ಯಾವುದಾದರೂ ವಿಧಾನವನ್ನು ಅಳವಡಿಸಬಹುದೇ ಎಂಬ ಕುರಿತು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ. ಈ ಕುರಿತು ಮೂರು ವಾರಗಳೊಳಗೆ ಉತ್ತರಿಸುವಂತೆ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಹೇಳಿದೆ.
ಮರಣದಂಡನೆ ಶಿಕ್ಷೆ ವಿಧಿಸುವ ವಿಧಾನದ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ನಮ್ಮ ಸಂವಿಧಾನ ಹಾನುಭೂತಿಯುಳ್ಳದ್ದಾಗಿದ್ದು, ಅದು ಜೀವನದ ಪವಿತ್ರತೆಯ ತತ್ವವನ್ನು ಗುರುತಿಸುತ್ತದೆ. ಆಧುನಿಕ ಕಾಲದಲ್ಲಿ ಹಲವು ವಿಧಾನಗಳನ್ನು ಕಂಡುಹಿಡಿದಿರುವಾಗ, ತಂತ್ರಜ್ಞಾನ ಇಷ್ಟೊಂದು ಮುಂದುವರಿದಿರುವಾಗ ಗಲ್ಲು ಶಿಕ್ಷೆಗೆ ಗುರಿಯಾಗಿರುವವರಿಗೆ ಬೇರೆ ವಿಧಾನಗಳ ಮೂಲಕ ಶಿಕ್ಷೆ ನೀಡಲು ಶಾಸನ ರೂಪಿಸುವ ಕುರಿತು ಸರ್ಕಾರ ಯೋಚಿಸಬಹುದು ಎಂದು ಹೇಳಿದೆ.
ಸಂವಿಧಾನದ 21ನೇ ಪರಿಚ್ಛೇದ ಜೀವಿಸುವ ಹಕ್ಕನ್ನು ಮನುಷ್ಯನಿಗೆ ಒದಗಿಸಿರುವುದಲ್ಲದೆ ಮರಣದಂಡನೆಗೆ ಗುರಿಯಾದ ಖೈದಿಗಳಿಗೆ ಕಡಿಮೆ ನೋವುಂಟುಮಾಡುವ ಸಾವನ್ನು ನೀಡಬೇಕು ಎಂದು ಕೂಡ ಹೇಳುತ್ತದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎಎಮ್ ಖನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ, ಕೇಂದ್ರ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿ ಮೂರು ವಾರಗಳೊಳಗೆ ಉತ್ತರಿಸುವಂತೆ ಸೂಚಿಸಿದೆ. ನ್ಯಾಯಮೂರ್ತಿಗಳು ಕಾನೂನು ಆಯೋಗದ 187ನೇ ವರದಿಯನ್ನು ಉಲ್ಲೇಖಿಸಿದ್ದಾರೆ.