ನವದೆಹಲಿ: ಕಾಂಚೀಪುರಂ ನಲ್ಲಿ ತನ್ನ ಎಟಿಎಂ ಕಾರ್ಡ್ ಪಿನ್ ಲಾಕ್ ಆದ ಕಾರಣ ಅಸಹಾಯಕತೆಯಿಂದ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಿದ್ದ ರಷ್ಯಾ ಪ್ರವಾಸಿಗನಿಗೆ ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಹಾಯ ಹಸ್ತ ಚಾಚಿದ್ದಾರೆ.
"ಇವಾಂಗೆಲಿ ನ್ - ನಿಮ್ಮ ದೇಶವು ನಮ್ಮ ಬಹು ಕಾಲದ ಸ್ನೇಹಿತ, ಚೆನ್ನೈನಲ್ಲಿರುವ ನಮ್ಮ ಅಧಿಕಾರಿಗಳು ನಿಮಗೆ ಎಲ್ಲಾ ಸಹಾಯವನ್ನು ಒದಗಿಸುತ್ತಾರೆ" ಎಂದು ಸ್ವರಾಜ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಪ್ರವಾಸ ಕೈಗೊಂಡಿದ್ದ 24 ವರ್ಷದ ಇವಾಂಗೆಲಿನ್ ಎಟಿಎಂ ಕಾರ್ಡ್ ಬಳಸಿ ಹಣವನ್ನು ಡ್ರಾ ಮಾಡಲು ವಿಫಲವಾದ ಕಾರಣ ಭಿಕ್ಷಾಟನೆ ಮಾಡಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇವಾಂಜೆಲಿನ್ ಕುಮಾರಕೊಟ್ಟಂ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಭಿಕ್ಷೆ ಬೇಡುತ್ತಿದ್ದರು.
ಕೆಲವರು ಅವರಿಗೆ ಹಣ ನೀಡಿದರೂ ವಿದೇಶೀಯರೊಬ್ಬರು ಭಿಕ್ಷೆ ಕೇಳುತ್ತಿರುವುದು ನೋಡಿ ಅಚ್ಚರಿ ಪಟ್ಟಿದ್ದರು. ಅದರಲ್ಲಿ ಕೆಲವರು ಪೋಲೀಸರಿಗೆ ಮಾಹಿತಿ ನೀಡಿದ್ದರು.
ಪ್ರವಾಸಿ ಇವಾಂಜೆಲಿನ್ ಅವರನ್ನು ಠಾಣೆಗೆ ಕರೆದೊಯ್ದ ಪೊಲೀಸರು ಅವರಿಗೆ ಹಣವನ್ನು ನೀಡಿದ್ದಲ್ಲದೆ ಚೆನ್ನೈಗೆ ತೆರಳಿ ಅಲ್ಲಿನ ರಷ್ಯಾ ದೂತವಾಸ ಕಛೇರಿಯನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.