ಮೃತ ಬಾಲಕಿಯ ತಾಯಿ ಕೊಯ್ಲಿ ದೇವಿ
ಸಿಮ್ಡೆಗಾ: ಜಾರ್ಖಾಂಡ್ ರಾಜ್ಯದ ಸಿಮ್ಡೆಗಾದಲ್ಲಿ ಮನಕಲುಕುವ ಘಟನೆಯೊಂದು ಇದೀಗ ಬೆಳಕಿಗೆ ಬಂದಿದೆ. ಆಧಾರ್ ಕಾರ್ಡ್ ಲಿಂಕ್ ಮಾಡದ ಕಾರಣ ಪಡಿತರ ಚೀಟಿ ರದ್ದುಕೊಂಡು ಪಡಿತರ ಸಿಗದ ಹಿನ್ನಲೆಯಲ್ಲಿ 11 ವರ್ಷದ ಬಾಲಕಿಯೊಬ್ಬಳು ಹಸಿವಿನಿಂದ ಸಾವನ್ನಪ್ಪಿದ್ದಾಳೆ ಘಟನೆ ನಡೆದಿದೆ.
ಸಂತೋಷಿ ಹಸಿವಿನಿಂದ ಸಾವನ್ನಪ್ಪಿದ ಬಾಲಕಿಯಾಗಿದ್ದಾಳೆ. ದುರ್ಗಾಪೂಜೆ ಹಿನ್ನಲೆಯಲ್ಲಿ ಸೆ.20 ರಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹೀಗಾಗಿ ಅಂದಿನಿಂದ ಬಾಲಕಿಗೆ ಶಾಲೆಯ ಮಧ್ಯಾಹ್ನದ ಬಿಸಿಯೂಟ ಕೂಡ ದೊರೆಯುತ್ತಿರಲಿಲ್ಲ.
ಸಂತೋಷಿ ಕುಟುಂಬ ಕಡುಬಡತನದಲ್ಲಿದ್ದು, ಬಾಲಕಿ ತಾಯಿ ರೇಷನ್ ತರುವ ಸಲುವಾಗಿ ನ್ಯಾಯಬೆಲೆ ಅಂಗಡಿಗೆ ಹೋಗಿದ್ದಾರೆ. ಈ ವೇಳೆ ನ್ಯಾಯಾಬೆಲೆ ಅಂಗಡಿಯವರು ರೇಷನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಿಲ್ಲ. ಹೀಗಾಗಿ ನಿಮಗೆ ರೇಷನ್ ಕೊಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿ ಕಳುಹಿಸಿದ್ದಾರೆ.
ಹೀಗಾಗಿ ಸಂತೋಷಿ ಸೇರಿದಂತೆ ಅವರ ಕುಟುಂಬ 4 ದಿನಗಳ ಕಾಲ ಉಪವಾಸದಲ್ಲಿಯೇ ಜೀವನ ನಡೆಸಿದೆ. ತೀವ್ರ ಹಸಿವಿನಿಂದ ಬಳಲುತ್ತಿದ್ದ ಸಂತೋಷಿ ಸೆ.28 ರಂದು ಸಾವನ್ನಪ್ಪಿದ್ದಾಳೆಂದು ತಾಯಿ ಕೊಯ್ಲಿ ದೇವಿ ಹೇಳಿಕೊಂಡಿದ್ದಾರೆ.
ಅಕ್ಕಿ ತರಲೆಂದು ನ್ಯಾಯಬೆಲೆ ಅಂಗಡಿಗೆ ಹೋಗಿದ್ದೆ. ಆದರೆ ಅವರು ನನಗೆ ರೇಷನ್ ನೀಡಲಿಲ್ಲ. ಅನ್ನ...ಅನ್ನ ಎಂತಲೇ ನನ್ನ ಮಗಳು ಸಾವನ್ನಪ್ಪಿದಳು ಎಂದು ಕೊಯ್ಲಿ ದೇವಿ ಹೇಳದ್ದಾರೆ.
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜಾರ್ಖಾಂಡ್ ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಸರ್ಯೂ ರಾಯ್ ಅವರು, ಸುಪ್ರೀಂಕೋರ್ಟ್ ಆದೇಶದ ಪ್ರತಿಯೊಂದಿಗೆ ನಾನು ಸ್ಪಷ್ಟವಾಗಿ ನಿರ್ದೇಶನವನ್ನು ಈ ಹಿಂದೆಯೇ ನಾನು ನೀಡಿದ್ದೆ. ಪಡಿತರ ಚೀಟಿಯೊಂದಿಗೆ ಯಾರು ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲವೋ ಅವರಿಗೆ ರೇಷನ್ ನೀಡಲಾಗುವುದು ಹಾಗೂ ಯಾರು ಆಧಾರ್ ಕಾರ್ಡ್ ನ್ನು ಪಡೆದುಕೊಂಡಿಲ್ಲವೊ ಅವರಿಗೆ, ಪರಿಶೀಲನೆ ಬಳಿಕ ರೇಷನ್ ನೀಡಲಾಗುತ್ತದೆ ಎಂದು ಹೇಳಿದ್ದೆ. ಪಡಿತರ ಚೀಟಿಯಿಂದ ಉಂಟಾಗ ಸಮಸ್ಯೆಗಳಿಂದ ಯಾರಾದರೂ ಸಾವನ್ನಪ್ಪಿದ್ದರೆ, ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.