ದೇಶ

ಗಾಯಕಿ ಹರ್ಷಿತಾ ದಹಿಯಾ ಕೊಲೆ ಪ್ರಕರಣಕ್ಕೆ ಹೊಸ ತಿರುವು: ಹತ್ಯೆ ಹಿಂದೆ ಭಾವ ದಿನೇಶ್ ಕೈವಾಡ

Manjula VN
ಚಂಡೀಗಢ: ಹರಿಯಾಣ ಗಾಯಕಿ ಹರ್ಷಿತಾ ದಹಿಯಾ ಕೊಲೆ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿದ್ದು, ಹತ್ಯೆ ಹಿಂದೆ ತನ್ನ ಕೈವಾಡವಿದೆ ಎಂದು ಹರ್ಷಿತಾ ಸಹೋದರಿ ಪತಿ ದಿನೇಶ್ ತಪ್ಪೊಪ್ಪಿಕೊಂಡಿದ್ದಾನೆಂದು ಶುಕ್ರವಾರ ತಿಳಿದುಬಂದಿದೆ. 
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಹರ್ಷಿತಾ ಸಹೋದರಿ, ಹರ್ಷಿತಾ ಹತ್ಯೆಯನ್ನು ತನ್ನ ಪತಿ ದಿನೇಶ್ ಮಾಡಿಸಿದ್ದಾರೆಂದು ಹೇಳಿದ್ದರು. ದಹಿಯಾ ತಾಯಿಯ ಕೊಲೆ ಪ್ರಕರಣದಲ್ಲಿ ಹರ್ಷಿತಾ ಪ್ರಮುಖ ಸಾಕ್ಷಿಯಾಗಿದ್ದರು ಈ ಹಿನ್ನಲೆಯಲ್ಲಿ ಹತ್ಯೆ ಮಾಡಿಸಲಾಗಿದೆ ಎಂದು ಆರೋಪಿಸಿದ್ದರು.
ಹೇಳಿಕೆ ಬೆನ್ನಲ್ಲೇ ಹರ್ಷಿತಾ ಭಾವ ದಿನೇಶ್ ನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಇದರಂತೆ ವಿಚಾರಣೆ ವೇಳೆ ಹತ್ಯೆ ಹಿಂದೆ ತನ್ನ ಕೈವಾಡವಿದೆ ಎಂದು ದಿನೇಶ್ ತಪ್ಪೊಪ್ಪಿಕೊಂಡಿದ್ದಾನೆಂದು ಪಾಣಿಪತ್ ಡಿವೈಎಸ್ಪಿ ದೇಶ್ ರಾಜ್ ಅವರು ಹೇಳಿದ್ದಾರೆ. ಅಲ್ಲದೆ, ದಿನೇಶ್ ನನ್ನು ನಾಲ್ಕು ದಿನಗಳ ಪೊಲೀಸರ ವಶಕ್ಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 
2014ರಲ್ಲಿ ದೆಹಲಿಯಲ್ಲಿ ಹರ್ಷಿತಾ ಅವರ ತಾಯಿಯವರನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ದಿನೇಶ್ ಆರೋಪಿಯಾಗಿದ್ದು, ಹರ್ಷಿತಾ ಅವರು ಪ್ರಮುಖ ಸಾಕ್ಷಿಯಾಗಿದ್ದರು. ಅಲ್ಲದೆ, ದಿನೇಶ್ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. 
ಗಾಯಕಿ ದರಿಯಾ ಅವರು ದೆಹಲಿಯ ನರೇಲಾ ಪ್ರದೇಶದಲ್ಲಿ ವಾಸವಾಗಿದ್ದರು. ಹರಿಯಾಣದಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಹಿಂದಿರುವ ವೇಳೆ ದಹಿಯಾ ಕಾರನ್ನು ಓವರ್ ಟೇಕ್ ಮಾಡಿದ್ದ ದುಷ್ಕರ್ಮಿಗಳು ಹರ್ಷಿತಾ ಅವರ ಕಾರನ್ನು ಅಡ್ಡಗಟ್ಟಿ ಗುಂಡು ಹಾರಿಸಿದ್ದರು. 
ಹರಿಯಾಣ ಚಿತ್ರೋದ್ಯಮದ ಕೆಲವು ವ್ಯಕ್ತಿಗಳಿಂದಲೂ ತಮಗೆ ಜೀವ ಬೆದರಿಕೆ ಇದೆ ಎಂದು ಹರ್ಷಿತಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮೂಲಕ ಹೇಳಿಕೊಂಡಿದ್ದರು. 
SCROLL FOR NEXT