ನವದೆಹಲಿ: ಅತ್ತ ದೀಪಾವಳಿ ಆಚರಣೆಗಾಗಿ ಪ್ರಧಾನಿ ಮೋದಿ ಯೋಧರನ್ನು ಭೇಟಿ ಮಾಡಿದ ಬೆನ್ನಲ್ಲೇ ಇತ್ತ ಕೇಂದ್ರ ಸರ್ಕಾರ ಯೋಧರಿಗೆ ದೀಪಾವಳಿ ಉಡುಗೊರೆ ನೀಡಿದ್ದು, ಯೋಧರು ಬಳಕೆ ಮಾಡುವ ಸ್ಯಾಟಲೈಟ್ ಫೋನ್ ಗಳ ಶುಲ್ಕವನ್ನು ಸಂಪೂರ್ಣವಾಗಿ ರದ್ದು ಮಾಡಿದೆ.
ಗಡಿಯಲ್ಲಿ ನಮಗೆ ರಕ್ಷಣೆ ನೀಡುವ ಯೋಧರು ತಮ್ಮ ಕುಟುಂಬ, ಬಂಧು, ಬಳಗ, ಆಪ್ತರನ್ನು ಬಿಟ್ಟು ಗಡಿಯಲ್ಲಿ ತಮ್ಮ ಜೀವ ಒತ್ತೆಯಿಟ್ಟು ಸೇವೆ ಸಲ್ಲಿಸುತ್ತಿರುತ್ತಾರೆ. ಇಂತಹ ಯೋಧರಿಗೆ ಕೇಂದ್ರ ದೂರಸಂಪರ್ಕ ಇಲಾಖೆ ಈ ಬಾರಿಯ ದೀಪಾವಳಿಗೆ ಎರಡು ಕೊಡುಗೆಗಳನ್ನು ಪ್ರಕಟಿಸಿದ್ದು, ಗಡಿಯಲ್ಲಿರುವ ಸಶಸ್ತ್ರ ಪಡೆ ಯೋಧರು ಹಾಗೂ ಅರೆಸೇನಾಪಡೆ ಯೋಧರು, ಸ್ಯಾಟಲೈಟ್ ಫೋನ್ ಗಳ ಮೂಲಕ ತಮ್ಮ ಬಂಧುಗಳೊಂದಿಗೆ ಮಾತನಾಡಲು ವಿಧಿಸಲಾಗುತ್ತಿದ್ದ ಕರೆಯ ದರವನ್ನು 5 ರೂ..ಗಳಿಂದ 1 ರೂ..ಗೆ ಇಳಿಸಲಾಗಿದೆ. ಅಲ್ಲದೆ, ಸ್ಯಾಟಲೈಟ್ ಫೋನ್ ಬಳಕೆಗೆ ಮಾಸಿಕವಾಗಿ ವಿಧಿಸಲಾಗುತ್ತಿದ್ದ 500 ರೂ.. ಶುಲ್ಕವನ್ನೂ ರದ್ದುಗೊಳಿಸಲಾಗಿದೆ. ಆ ಮೂಲಕ ಇನ್ನು ಮುಂದೆ ಯೋಧರು ಉಚಿತವಾಗಿ ಫೋನ್ ಬಳಸಬಹುದಾಗಿದೆ. ಪ್ರಸ್ತುತದ ದೇಶದಲ್ಲಿ 2,500 ಸ್ಯಾಟಲೈಟ್ ಫೋನ್ ಸಂಪರ್ಕ ನೀಡಲಾಗಿದೆ.
ಈ ಬಗ್ಗೆ ಪತ್ರಕರ್ತರ ಜತೆ ಮಾತನಾಡಿದ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಈ ಎರಡು ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ಈ ಎರಡೂ ಕೊಡುಗೆಗಳು ಗುರುವಾರ ಅಂದರೆ ಅಕ್ಟೋಬರ್ 19ರಿಂದಲೇ ಜಾರಿಗೆ ಬರಲಿದೆ.
2009-10ರಲ್ಲಿ ಗಡಿ ಭಾಗಗಳಲ್ಲಿನ ಸೈನಿಕರಿಗೆ ಸ್ಯಾಟಲೈಟ್ ಫೋನ್ ಮೂಲಕ ತಮ್ಮ ಬಂಧುಗಳಿಗೆ ಕರೆ ಮಾಡುವ ಸೌಕರ್ಯ ನೀಡಲಾಗಿತ್ತು. ಆರಂಭದಲ್ಲಿ ಈ ಸೇವೆಯನ್ನು ಟಾಟಾ ಟೆಲಿ ಸಂಸ್ಥೆ ನೀಡುತ್ತಿತ್ತು. ಈಗ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಈ ಸೇವೆ ಒದಗಿಸುತ್ತಿದೆ. ಪ್ರತಿ 5 ವರ್ಷಗಳಿಗೊಮ್ಮೆ ಈ ದರವನ್ನು ಪರಿಷ್ಕರಿಸಲಾಗುತ್ತದೆ. ಕರೆ ದರ ಇಳಿಕೆಯಿಂದ ಇಲಾಖೆಗೆ ವಾರ್ಷಿಕವಾಗಿ 3ರಿಂದ 4 ಕೋಟಿ ರೂ.. ಹೊರೆಬೀಳಲಿದ್ದು, ಇದನ್ನು ಕೇಂದ್ರ ಸರ್ಕಾರ ಭರಿಸುತ್ತದೆ ಎಂದು ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ಅರುಣಾ ಸುಂದರರಾಜನ್ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos