ನವದೆಹಲಿ: ದೇಶಾದ್ಯಂತ ದೀಪಾವಳಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ದೆಹಲಿಯಲ್ಲಿ ಪಟಾಕಿ ನಿಷೇಧಿಸಿದ್ದರ ಹೊರತಾಗಿಯೂ ಅಗ್ನಿ ಅವಗಢಗಳಿಗೇನು ಕಡಿಮೆ ಇರಲಿಲ್ಲ.
ದೆಹಲಿಯ ಅಗ್ನಿಶಾಮಕ ದಳ ಅಗ್ನಿ ಅವಗಢಕ್ಕೆ ಸಂಬಂಧಿಸಿದಂತೆ 200 ಕರೆಗಳನ್ನು ಸ್ವೀಕರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅಂತಿಮ ಅಂಕಿ-ಅಂಶಗಳು ಇನ್ನಷ್ಟೇ ಪ್ರಕಟಗೊಳ್ಳಬೇಕಿದ್ದರೂ ಸುಪ್ರೀಂ ಕೋರ್ಟ್ ಪಟಾಕಿ ನಿಷೇಧಿಸಿದ್ದರ ಪರಿಣಾಮವಾಗಿ ಅಗ್ನಿ ಅವಗಢಕ್ಕೆ ಸಂಬಂಧಿಸಿದ ಪ್ರಕರಣಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಧ್ಯ ರಾತ್ರಿ 12 ರಿಂದ ಮರು ದಿನ ರಾತ್ರಿ 9 ವರೆಗೂ 139 ಕರೆಗಳನ್ನು ಸ್ವೀಕರಿಸಿದ್ದೇವೆ, ಪೀಕ್ ಅವರ್ ನಲ್ಲಿ 62 ಕರೆಗಳನ್ನು ಸ್ವೀಕರಿಸಿದ್ದೇವೆ ಎಂದು ದೆಹಲಿ ಅಗ್ನಿಶಾಮಕ ಸೇವೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ದೀಪಾವಳಿ ಹಿನ್ನೆಲೆಯಲ್ಲಿ ಇಲಾಖೆ ಫೋನ್ ಲೈನ್ ಗಳನ್ನೂ ಹೆಚ್ಚಿಸಿತ್ತು, ಕಳೆದ ವರ್ಷ ಅಗ್ನಿ ಅವಗಢಕ್ಕೆ ಸಂಬಂಧಿಸಿದಂತೆ 300 ಕರೆಗಳನ್ನು ಸ್ವೀಕರಿಸಿದ್ದೆವು ಎಂದು ಕಂಟ್ರೋಲ್ ರೂಂ ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.