ಚಂಡೀಘಡ: ಗುರುವಾರ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರ್ ಎಸ್ ಎಸ್ ಮುಖಂಡ ರವೀಂದ್ರ ಗೋಸೇನ್ ಅವರ ಪ್ರಕರಣದ ತನಿಖಾ ಜವಾಬ್ದಾರಿಯನ್ನು ಪಂಜಾಬ್ ಸರ್ಕಾರ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ.
ಗುರುವಾರ ಬೆಳಗ್ಗೆ ಪಂಜಾಬ್ ನ ಲುಧಿಯಾನದಲ್ಲಿ ಆರ್ಎಸ್ಎಸ್ ಕವಾಯತನ್ನು ಮುಗಿಸಿ ಮನೆಗೆ ಮರಳುತ್ತಿದ್ದ ಗೋಸೇನ್ ರನ್ನು ಇಲ್ಲಿನ ಮೋಟರ್ ಬೈಕಿನಲ್ಲಿ ಬಂದ ಇಬ್ಬರು ತರುಣರು ಗುಂಡಿಕ್ಕಿ ಕೊಂದು ಹಾಕಿದ್ದರು. ಗೋಸೇನೆ ಹತ್ಯೆ ವ್ಯಾಪಕ ಸುದ್ದಿಯಾಗುತ್ತಿದ್ದಂತೆಯೇ ಎಚ್ಚೆತ್ತ ಪಂಜಾಬ್ ಸರ್ಕಾರ ಇದೀಗ ಪ್ರಕರಣದ ಎನ್ ಐಎ ತನಿಖೆಗೆ ಆದೇಶಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಪ್ರಕರಣವನ್ನು ಎನ್ ಐಎ ತನಿಖಿಗೆ ಆದೇಶಿಸಲಾಗಿದೆ. ಅಂತೆಯೇ ಸಂತ್ರಸ್ಥರ ಕುಟುಂಬಕ್ಕೆ ಐದು ಲಕ್ಷ ರು.ಗಳ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಸಿಎಂ ಅಮರೀಂದರ್ ಸಿಂಗ್ ರನ್ನು ಭೇಟಿ ಮಾಡಿದ್ದ ಆರ್ ಎಸ್ ಎಸ್ ಮುಖಂಡರು ಗೋಸೇನ್ ಹತ್ಯೆ ಪ್ರಕರಣದಲ್ಲಿ ಕೂಲಂಕುಷ ತನಿಖೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಈ ಭೇಟಿ ಬೆನ್ನಲ್ಲೇ ಎನ್ ಐಎ ತನಿಖೆಗೆ ಆದೇಶ ನೀಡಲಾಗಿದೆ.