ನವದೆಹಲಿ: ವಾಯುಮಾಲೀನ್ಯ ತಡೆಗಟ್ಟುವ ಉದ್ದೇಶದಿಂದ ಪಟಾಕಿ ಮೇಲೆ ಸುಪ್ರೀಂ ಕೋರ್ಟ್ ಹೇರಿರುವ ನಿಷೇಧ ದೆಹಲಿ ಮೇಲೆ ಅಂತಹ ಗಂಭೀರ ಪರಿಣಾಮ ಬೀರಿಲ್ಲ ಎಂದು ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿರುವ ವಾಯು ಮಾಲೀನ್ಯ ವರದಿ ಇಂತಹುದೊಂದು ವಾದಕ್ಕೆ ಪುಷ್ಟಿ ನೀಡುತ್ತಿದ್ದು, ಪಟಾಕಿ ನಿಷೇಧದಿಂದಾಗಿ ದೆಹಲಿ ವಾಯುಮಾಲೀನ್ಯ ನಿಯಂತ್ರಣದಲ್ಲಿ ಮಹತ್ತರ ಸುಧಾರಣೆ ಕಂಡುಬಂದಿಲ್ಲ. ಆದರೆ 2016ರಲ್ಲಿದ್ದ ಪರಿಸ್ಥಿತಿಗಿಂತ ಕೊಂಚ ಸುಧಾರಿಸಿದೆಷ್ಟೇ.. ಈ ಸುಧಾರಣೆ ವಾಯು ಗುಣಮಟ್ಟ ಸುಧಾರಣೆಗೆ ಏನೇನೂ ಸಾಲದು ಎಂದು ತಜ್ಞರು ಹೇಳಿದ್ದಾರೆ.
ದೆಹಲಿಯಲ್ಲಿ ಪ್ರಸ್ತುತ ವಾಯು ಮಾಲೀನ್ಯ ಅಪಾಯದ ಮಟ್ಟ ಮೀರಿದ್ದು, ಪಿಎಂ 2.5 ಮತ್ತು ಪಿಎಂ10 ಪ್ರಮಾಣ ಗಣನೀಯವಾಗಿ ಏರುಗತಿಯಲ್ಲೇ ಇದೆ. ಪ್ರಮುಖವಾಗಿ ದೀಪಾವಳಿ ಸಂದರ್ಭವಾಗಿರುವ ಈಗ ಸಂಜೆ 7 ಗಂಟೆ ಬಳಿಕ ದೆಹಲಿಯಲ್ಲಿ ಅಪಾಯಕಾರಿ ಪಿಎಂ 2.5 ಮತ್ತು ಪಿಎಂ10 ರಾಸಾಯನಿಕಗಳ ಪ್ರಮಾಣ ಏರಿಕೆ ಕಂಡುಬಂದಿದೆ. ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ನೀಡಿರುವ ವರದಿಯಂತೆ ದೆಹಲಿಯಲ್ಲಿ ನಿಷೇಧದ ಹೊರತಾಗಿಯೂ ನಗರದ ಹಲವು ಭಾಗಗಳಲ್ಲಿ ಪಟಾಕಿ ಸಿಡಿಸಲಾಗಿದ್ದು, ಇದರಿಂದ ವಾತಾವರಣಕ್ಕೆ ಮತ್ತಷ್ಟು ಕಲುಷಿತ ಗಾಳಿ ಸೇರ್ಪಡೆಯಾದಂತಾಗಿದೆ. ಪ್ರಮುಖವಾಗಿ ಬೆಳಗ್ಗೆ 7 ರಿಂದ ರಾತ್ರಿರ ಸಂದರ್ಭದಲ್ಲಿ ದೆಹಲಿಯಲ್ಲಿ ಪಿಎಂ 2.5 ಮತ್ತು ಪಿಎಂ10 ರಾಸಾಯನಿಕಗಳ ಪ್ರಮಾಣ ಕಡಿಮೆ ಇದ್ದು, ರಾತ್ರಿ 7 ರಿಂದ ಬೆಳಗ್ಗೆ 7ರವರೆಗೂ ಈ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿರುತ್ತದೆ.
ಮಾಲೀನ್ಯ ಏರಿಕೆಯಲ್ಲಿ ದೆಹಲಿಯಲ್ಲಿ ಕದ್ದುಮುಚ್ಚಿ ಸಿಡಿಸುವ ಪಟಾಕಿ ಸ್ಫೋಟದಿಂದ ಉಂಟಾಗುವ ಮಾಲೀನ್ಯ ಹೊಗೆಯ ಕೊಡುಗೆ ಕೂಡ ಇದೆ ಎಂದು ತಜ್ಞರು ಹೇಳಿದ್ದಾರೆ. ಬೆಳಗಿನ ಸಂದರ್ಭದಲ್ಲಿ ಪಿಎಂ 2.5 ಮತ್ತು ಪಿಎಂ10 ನ ಪ್ರಮಾಣ ಕ್ಯೂಬಿಕ್ ಮೀಟರ್ ಗೆ 154 ಮೈಕ್ರೋ ಗ್ರಾಮ್ಸ್ ನಷ್ಟಿದ್ದರೇ ಇದೇ ಸಂಜೆ 7ರಿಂದ ಬೆಳಗ್ಗೆ 7ರವರೆಗೂ ಕ್ಯೂಬಿಕ್ ಮೀಟರ್ ಗೆ 256 ಮೈಕ್ರೋ ಗ್ರಾಮ್ಸ್ ಗಳಷ್ಟಿರುತ್ತದೆ. ದೆಹಲಿ ಮಾತ್ರವಲ್ಲದೇ ದೆಹಲಿಯ ಅಕ್ಕಪಕ್ಕದ ನಗರಗಳಾದ ಗುರುಗ್ರಾಮ, ನೋಯ್ಡಾ ಮತ್ತು ಘಾಜಿಯಾ ಬಾದ್ ನಲ್ಲೂ ಇದೇ ಪರಿಸ್ಥಿತಿ ಇದೆ. ದೆಹಲಿಯಲ್ಲಿರುವಂತೆ ಈ ಮೂರು ನಗರಗಳಲ್ಲಿ ಪಟಾಕಿಗೆ ನಿಷೇಧವಿಲ್ಲ. ಹೀಗಾಗಿ ಇದೂ ಕೂಡ ವಾಯು ಮಾಲೀನ್ಯ ಏರಿಕೆಗೆ ಕಾರಣ ಎನ್ನಲಾಗಿದೆ.
ದೇಶದ ಏಳು ನಗರಗಳಲ್ಲಿ ಶಬ್ಧ ಮಾಲೀನ್ಯ ಶೇ.85ರಷ್ಟು ಏರಿಕೆ
ಇನ್ನು ಕೇವಲ ವಾಯು ಮಾಲೀನ್ಯವಷ್ಟೇ ಅಲ್ಲ ದೇಶದಲ್ಲಿ ಶಬ್ದ ಮಾಲೀನ್ಯ ಪ್ರಮಾಣ ಕೂಡ ಶೇ.85ರಷ್ಟು ಏರಿಕೆಯಾಗಿದ್ದು, ದೇಶಾದ್ಯಂತ ಇರುವ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB)ಯ 70 ಸರ್ವೇಕ್ಷಣಾ ಕೇಂದ್ರಗಳು ನೀಡಿರುವ ವರದಿಯಂತೆ ದೇಶದಲ್ಲಿ ಶಬ್ದ ಮಾಲೀನ್ಯ ಶೇ.85ರಷ್ಟು ಏರಿಕೆಯಾಗಿದೆಯಂತೆ. ದೇಶದ ಏಳು ಪ್ರಮುಖ ನಗರಗಳಲ್ಲಿ ಅಂದರೆ ಚೆನ್ನೈ, ಬೆಂಗಳೂರು, ಕೊಲ್ಕತ್ತಾ, ಹೈದರಾಬಾದ್, ಲಖನೌ, ದೆಹಲಿ ಮತ್ತು ಮುಂಬೈ ನಲ್ಲಿ ಶಬ್ದ ಮಾಲೀನ್ಯ ಮಾಪನ ಕೇಂದ್ರಗಳಿದ್ದು, ಈ ಕೇಂದ್ರಗಳು ನೀಡಿರುವ ಮಾಹಿತಿಯಂತೆ ಸಾಮಾನ್ಯ ದಿನಗಳಿಗಿಂತ ದೀಪಾವಳಿ ಸಂದರ್ಭದಲ್ಲಿ ದೇಶದಲ್ಲಿ ಶಬ್ದ ಮಾಲೀನ್ಯ ಶೇ.85ರಷ್ಟು ಏರಿಕೆಯಾಗಿದೆ ಎಂದು ಹೇಳಲಾಗಿದೆ.
ಎಚ್ಚೆತ್ತ ಬೆಂಗಳೂರಿಗರಿಂದ ಪಟಾಕಿಗೆ ನೀರಸ ಪ್ರತಿಕ್ರಿಯೆ
ಅತ್ತ ದೆಹಲಿಯಲ್ಲಿ ವಾಯು ಮಾಲೀನ್ಯ ನಿಯಂತ್ರಣ ಮೀರಿ ಅಪಾಯದ ಮಟ್ಟ ಮೀರಿದ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್ ಪಟಾಕಿಗೆ ನಿಷೇಧ ಹೇರಿತ್ತು. ಇದೀಗ ದೇಶದ ವಿವಿಧ ನಗರಗಳಲ್ಲೂ ವಾಯು ಮಾಲೀನ್ಯ ಏರಿಕೆಯಾಗುತ್ತಿದೆ. ಪ್ರಮುಖವಲಾಗಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ವಾಯು ಮಾಲೀನ್ಯ ದಿನೇ ದಿನೇ ಹೆಚ್ಚಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಜಾಗೃತಿ ಅಭಿಯಾನ ಕೂಡ ನಡೆಯುತ್ತಿದೆ. ಅವುಗಳ ಸಂಘಟಿತ ಪ್ರಯತ್ನವೇನೋ ಎಂಬಂತೆ ಬೆಂಗಳೂರಿನಲ್ಲಿ ಪಟಾಕಿ ಮಾರಾಟ ವಹಿವಾಟಿನಲ್ಲಿ ಶೇ.50-60ರಷ್ಟು ಕುಸಿದಿದೆ ಎನ್ನಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos