ದೇಶ

ವಿವಾದಗಳ ನಡುವೆಯೇ ತಾಜ್ ಮಹಲ್ ಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ

Srinivasamurthy VN
ಆಗ್ರಾ: ತಾಜ್ ಮಹಲ್ ಕುರಿತ ವಿವಾದಗಳು ತಾರಕಕ್ಕೇರಿರುವ ಬೆನ್ನಲ್ಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್ ಮಹಲ್ ಗೆ ಗುರುವಾರ ಬೆಳಗ್ಗೆ ಭೇಟಿ ನೀಡಿದ್ದಾರೆ.
ಸ್ವಚ್ಛಭಾರತ ಅಭಿಯಾನದ ನಿಮಿತ್ತ ತಾಜ್ ಮಹಲ್ ನಲ್ಲಿ ಉತ್ತರ ಪ್ರದೇಶ ಸರ್ಕಾರ ಹಮ್ಮಿಕೊಂಡಿರುವ ಸ್ವಚ್ಛತಾ ಕಾರ್ಯಕ್ರಮದಲ್ಲಿ ಯೋಗಿ ಆದಿತ್ಯನಾಥ್ ಪಾಲ್ಗೊಂಡಿದ್ದು, ತಾಜ್ ಮಹಲ್ ನ ಪಶ್ಚಿಮ ದ್ವಾರದಲ್ಲಿ ಕಸ ಗುಡಿಸಲಿದ್ದಾರೆ. ಸಿಎಂ ಆದ ಬಳಿಕ ಅದರಲ್ಲೂ ಪ್ರಮುಖವಾಗಿ ತಾಜ್ ಮಹಲ್ ಕುರಿತ ವಿವಾದಗಳು ಭುಗಿಲೆದ್ದ ಬಳಿಕ ಇದೇ ಮೊದಲ ಬಾರಿಗೆ ಸಿಎಂ ಯೋಗಿ ಆದಿತ್ಯನಾಥ್ 17ನೇ ಶತಮಾನದ ಐತಿಹಾಸಿಕ ಕಟ್ಟಡ ತಾಜ್ ಮಹಲ್  ಗೆ ಭೇಟಿ ನೀಡಿದ್ದಾರೆ.
ಇಂದಿನ ಭೇಟಿ ಸಂದರ್ಭದಲ್ಲಿ ಸಿಎಂ ಯೋದಿ ಆದಿತ್ಯನಾಥ್ ಅವರು ತಾಜ್ ಮಹಲ್ ನ ಒಳಗೆ ಪ್ರವೇಶ ಮಾಡಲಿದ್ದು, ತಾಜ್ ಮಹಲ್ ನ ವಿವಿಧ ಮೂಲೆಗಳನ್ನು ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೆ ಶಹಜಹಾನ್ ಸಮಾಧಿ,  ಮುಮ್ತಾಜ್ ಮಹಲ್, ಶಹಜಹಾನ್ ಪಾರ್ಕ್ ಗೂ ಯೋಗಿ ಭೇಟಿ ನೀಡಲಿದ್ದಾರೆ.ಕೇವಲ ಭೇಟಿ ಮಾತ್ರವಲ್ಲದೇ ಐತಿಹಾಸಿಕ ಕಟ್ಟದ ಒಳ ಹಾಗೂ ಹೊರಗಿನ ಪ್ರದೇಶಗಳನ್ನು ಕೂಲಂಕುಷವಾಗಿ ಪರಿಶೀಲಿಸಲಿದ್ದಾರೆ. ಅಂತೆಯೇ ಆಗ್ರಾ  ಕೋಟೆಯಿಂದ ನೇರವಾಗಿ ತಾಜ್ ಮಹಲ್ ಗೆ ಪ್ರವಾಸಿಗರು ತೆರಳಲು ಅನುಕೂಲವಾಗುವಂತೆ ಸರ್ಕಾರ ನಿರ್ಮಿಸುತ್ತಿರುವ ಕಾಮಗಾರಿಗೆ ಶಂಕುಸ್ಥಾಪನೆ ಕೂಡ ನೆರವೇರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಹೆಚ್ಚು  ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ಇನ್ನು ಸಿಎಂ ಯೋಗಿ ಆದಿತ್ಯನಾಥ್ ರೊಂದಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ, ಅವನೀಶ್ ಅವಸ್ಥಿ ಹಾಗೂ ಪ್ರವಾಸೋಧ್ಯಮ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದ್ದಾರೆ.
ಈ ಹಿಂದೆ ಇದೇ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಉತ್ತರ ಪ್ರದೇಶದ ಪ್ರವಾಸಿತಾಣಗಳ ಪಟ್ಟಿಯಿಂದ ತಾಜ್ ಮಹಲ್ ಅನ್ನು ತೆಗೆದು ಹಾಕಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತಲ್ಲದೇ ತಾಜ್ ಮಹಲ್  ಪರ-ವಿರೋಧ ಚರ್ಚೆಗಳಿಗೂ ದಾರಿ ಮಾಡಿತ್ತು,
SCROLL FOR NEXT