ಜೋಧ್ಪುರ: ಬ್ಲೂವೇಲ್ ಚಾಲೆಂಜ್ ನ ಕೊನೆಯ ಹಂತದ ಆಟ ಆಡಲು ಇಷ್ಟವಿಲ್ಲದೇ ಹೋದರೂ, ತನ್ನ ತಾಯಿ ಹಾಗೂ ಕುಟುಂಬ ಸದಸ್ಯರಿಗೆ ಆಟದ ನಿರ್ವಾಹಕರು ಹಾನಿ ಉಂಟು ಮಾಡುತ್ತಾರೆಂಬ ಭೀತಿಯಿಂದಾಗಿ ಬಾಲಕಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆಯೊಂದು ರಾಜಸ್ತಾನದ ಜೋಧ್ಪುರದಲ್ಲಿ ಸೋಮವಾರ ನಡೆದಿದೆ.
ಬಾಲಕಿ ಕೆರೆಗೆ ಹಾರಿದ ಕೆಲವೇ ನಿಮಿಷಗಳಲ್ಲಿ ಕೆರೆಯ ಸಮೀಪದಲ್ಲಿಯೇ ಇದ್ದ ಕೆಲ ವಾಹನ ಚಾಲಕರು, ಆಕೆಯ ಈ ಕೃತ್ಯವನ್ನು ಗಮನಿಸಿ ಮುಳುಗುತ್ತಿದ್ದ ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.
ಬಿಎಸ್ಎಫ್ ಯೋಧರೊಬ್ಬರ ಪುತ್ರಿಯಾಗಿರುವ 17 ವರ್ಷದ ಬಾಲಕಿ ಕೆಲ ದಿನಗಳ ಹಿಂದೆ ಮೊಬೈಲ್ ನಲ್ಲಿ ಬ್ಲೂವೇಲ್ ಚಾಲೆಂಜ್ ಗೇಮ್ ಡೌನ್ ಲೋಡ್ ಮಾಡಿಕೊಂಡಿದ್ದಳು. ಆಟದ ಎಲ್ಲಾ ಹಂತಗಳನ್ನು ಪೂರೈಸಿದ್ದ ಆಕೆಗೆ ಕಡೆಯ ಹಂತವಾಗಿ ಆತ್ಮಹತ್ಯೆಯ ಚಾಲೆಂಜ್ ನೀಡಲಾಗಿತ್ತು. ಆದರೆ, ಆಕೆಗೆ ಸಾಯಲು ಇಷ್ಟವಿರಲಿಲ್ಲ. ಆದರೆ, ಕಡೆಯ ಟಾಸ್ಕ್ ಆಡದೇ ಹೋದರೆ ಆಟದ ನಿರ್ವಾಹಕರು ಎಲ್ಲಿ ತಮ್ಮ ಕುಟುಂಬಸ್ಥರಿಗೆ ತೊಂದರೆ ಮಾಡುತ್ತಾರೋ ಎಂದು ಹೆರಿ ಬಾಲಕಿ ಕಯ್ಲಾನಾ ಕೆರೆಗೆ ಹಾರಲು ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಬಂದಿದ್ದಾಳೆ.
ಈ ನಡುವೆ ಮನೆಯಲ್ಲಿ ಬಾಲಕಿ ಕಾಣಿಸದೆ ಗಾಬರಿಗೊಂಡ ಪೋಷಕರು ಠಾಣೆಯಲ್ಲಿ ದೂರು ನೀಡಿದ್ದಾರೆ. ಮತ್ತೊಂದೆಡೆ ಬಾಲಕಿ ಕೆರೆಯ ಬಳಿ ತೆರಳಿ ರಾತ್ರಿ 11 ಗಂಟೆ ಸುಮಾರಿಗೆ ನೀರಿದೆ ಧುಮುಕಿದ್ದಾಳೆ. ಆದರೆ, ಸಮೀಪದಲ್ಲಿಯೇ ಇದ್ದ ಕೆಲ ವಾಹನ ಚಾಲಕರು ಇದನ್ನು ಗಮನಿಸಿ ತಾವೂ ನೀರಿಗೆ ಧುಮುಕಿ ಬಾಲಕಿಯನ್ನು ರಕ್ಷಿ,ಿದ್ದಾರೆ. ಆದರೆ ರಕ್ಷಿಸಿದ ಬಳಿಕವೂ ಅವರಿಂದ ತಪ್ಪಿಸಿಕೊಂಡ ಬಾಲಕಿ ಮತ್ತೊಮ್ಮೆ ಕೆರೆಗೆ ಹಾರಿದ್ದಾಳೆ. ಆದರೆ, ಚಾಲಕರ ತಂಡ ಮತ್ತೆ ನೀರಿಗೆ ಹಾಕಿ ಆಕೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಕಿ ಅಳುತ್ತಾ ರಸ್ತೆ ಬಳಿ ಹೋಗುತ್ತಿದ್ದಳು. ಈ ವೇಳೆ ಆಕೆ ಕೆರೆಗ ಹಾರುತ್ತಿರುವುದು ಕಂಡು ಬಂದಿತ್ತು. ಬಳಿಕ ಆಕೆಯ ಹಿಂದೆಯೇ ನಾನು ಓಡಿದೆ. ಆಕೆಯನ್ನು ನಿಲ್ಲಿಸಲು ಯತ್ನಿಸಿದೆ. ಬಾಲಕಿಯೊಂದಿಗೆ ಮಾತನಾಡುತ್ತಾ ಏನಾಯಿತು ಎಂದು ಕೇಳಿದೆ. ಈ ವೇಳೆ ಬಾಲಕಿ ನನ್ನ ತಾಯಿ ಸಾಯಿತ್ತಾಳೆಂದು ಅಳುತ್ತಾ ಹೇಳಿದಳು. ನಿನ್ನ ತಾಯಿ ಏಕೆ ಸಾಯುತ್ತಾರೆಂದು ಕೇಳಿದಾಗ, ನಾನೊಂದು ಆಟವಾಡುತ್ತಿದ್ದು, ಆಟದ ಕೊನೆಯ ಹಂತ ತಲುಪಿದ್ದೇನೆ. ಟಾಸ್ಕ್ ಪೂರ್ಣಗೊಳಿಸದಿದ್ದರೆ, ನನ್ನ ತಾಯಿ ಸಾಯುತ್ತಾಳೆಂದು ಬಾಲಕಿ ಹೇಳಿದಳು ಎಂದು ಬಾಲಕಿಯನ್ನು ರಕ್ಷಿಸಿದ ಸ್ಥಳೀಯ ಓಂ ಪ್ರಕಾಶ್ ಎಂಬುವವರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos