ಲಖನೌ: ಅಪಾಯಕಾರಿ ಆಟ ಬ್ಲೂವೇಲ್ ಭೂತ ದೇಶದಾದ್ಯಂತ ಭೀತಿಯನ್ನು ಸೃಷ್ಟಿಸಿದ್ದು, ಮಾರಣಾಂತಿಕ ಆಟಕ್ಕೆ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಠಿಣ ಕ್ರಮ ಕೈಗೊಂಡಿರುವ ಲಖನೌ ಶಿಕ್ಷಣ ಇಲಾಖೆ ಶಾಲೆಗಳಲ್ಲಿ ಸ್ಮಾರ್ಟ್ ಫೋನ್ ಬಳಕೆಗಳ ಮೇಲೆ ನಿಷೇಧ ಹೇರಿದೆ.
ಬ್ಲೂವೇಲ್ ಚಾಲೆಂಜ್ ಗೇಮ್ ನಿಂದ ಮಕ್ಕಳನ್ನು ದೂರವಿಡುವ ಸಲುವಾಗಿ ಅಧಿಕಾರಿಗಳು ಈ ಕ್ರಮವನ್ನು ಕೈಗೊಂಡಿದ್ದು, ಮಕ್ಕಳು ಮೊಬೈಲ್ ಗಳಲ್ಲಿ ಆಟಗಳನ್ನು ಆಟದಂತೆ ಪೋಷಕರು ಹಾಗೂ ಶಿಕ್ಷಕರು ನೋಡಿಕೊಳ್ಳಬೇಕೆಂದು ಇಲಾಖೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ಬ್ಲೂವೇಲ್ ಆಟದ ಚಟಕ್ಕೆ ಬಿದ್ದಿದ್ದ 14 ವರ್ಷದ ಬಾಲಕ ಆದಿತ್ಯಾನ್ ವರ್ಧನ್ ಎಂಬ ಬಾಲಕ ಕೆಲ ದಿನಗಳ ಹಿಂದಷ್ಟೇ ಕೊಠಡಿಯಲ್ಲಿ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ ಶಾಲೆಗಳಲ್ಲಿ ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಗಳನ್ನು ಬಳಕೆ ಮಾಡದಂತೆ ನಿಷೇಧ ಹೇರಿದೆ. ಪ್ರತಿ ನಿತ್ಯ ಮಕ್ಕಳನ್ನು ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದ್ದು, ಮಕ್ಕಳ ಚಟವಟಿಕೆಗಳ ಮೇಲೆ ಗಮನ ಹರಿಸುವಂತೆ ಶಿಕ್ಷಕರು ಹಾಗೂ ಪೋಷಕರಿಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿ ಮುಕೇಶ್ ಮುಕಾರ್ ಸಿಂಗ್ ಅವರು ಹೇಳಿದ್ದಾರೆ.
ಶಾಲೆಗೆ ಬರುವ ಮಕ್ಕಳು ಮೊಬೈಲ್ ಗಳನ್ನು ಇಟ್ಟುಕೊಂಡಿದ್ದಾರೆಯೇ ಎಂಬುದರ ಕುರಿತಂತೆ ಪರಿಶೀಲನೆ ನಡೆಸುವಂತೆ ಈಗಾಗಲೇ ಎಲ್ಲಾ ಶಾಲೆಗಳ ಆಡಳಿತ ಮಂಡಳಿಗಳಿಗೂ ಸೂಚಿಸಲಾಗಿದೆ. ಮಗುವಿನ ವರ್ತನೆಯಲ್ಲಿ ಬದಲಾವಣೆಗಳು ಕಂಡುಬಂದಿದ್ದೇ ಆದರೆ, ಅಧಿಕಾರಿಗಳಿಗೆ ಮಾಹಿತಿ ತಿಳಿಸಿ ಬಳಿಕ ಮಕ್ಕಳಿಗೆ ಕೌನ್ಸಿಲಿಂಗ್ ಕೊಡಿಸುವಂತೆಯೂ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.