ನವದೆಹಲಿ: ದೀನದಯಾಳ್ ಉಪಾಧ್ಯಾಯರ ಜನ್ಮ ಶತಮಾನೋತ್ಸವ ಹಾಗೂ ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ್ದರ 125 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೆ.11 ರಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ.
ಇಂದು 9/11 ಎಂದೇ ಪ್ರಸಿದ್ಧವಾದ ದಿನಾಂಕವಾಗಿದೆ. ಈ ದಿನಾಂಕವನ್ನು 2001 ರ ಘಟನೆಯ ಬಳಿಕ ವ್ಯಾಪಕವಾಗಿ ನೆನಪಿಸಿಕೊಳ್ಳಲಾಗುತ್ತದೆ. ಆದರೆ 1893ರ 9/11 ನ್ನೂ ನಾವು ನೆನಪಿಟ್ಟುಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕನ್ನರು 1893 ರಲ್ಲಿ ನಡೆದಿದ್ದ ಮೊದಲ 9/11 ರನ್ನು ಮರೆತಿದ್ದರು ಪರಿಣಾಮವಾಗಿ ಎರಡನೇ 9/11 ನಡೆಯಿತು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಸ್ವಾಮಿ ವಿವೇಕಾನಂದರು ನಮ್ಮ ಸಮಾಜದಲ್ಲಿ ನುಸುಳಿರುವ ದುಷ್ಟಶಕ್ತಿಗಳ ಬಗ್ಗೆ ಧ್ವನಿ ಎತ್ತಿದ್ದರು. ಸ್ವಾಮಿ ವಿವೇಕಾನಂದರು ಭಾಷಣ ಮಾಡುವುದಕ್ಕೂ ಮುನ್ನ ಅಲ್ಲಿನ ಜನತೆಗೆ ಮಹಿಳೆಯರೇ ಮತ್ತು ಮಹನೀಯರೇ( ಲೇಡೀಸ್ ಆಂಡ್ ಜೆಂಟಲ್ ಮೆನ್) ಎಂಬ ಶಬ್ದವನ್ನು ಹೊರತುಪಡಿಸಿ ಭಾಷಣ ಪ್ರಾರಂಭಿಸುವುದಕ್ಕೆ ಬೇರೆ ಶಬ್ದ ತಿಳಿದಿರಲಿಲ್ಲ. ಆದರೆ ಮೊದಲ ಬಾರಿಗೆ ವಿವೇಕಾನಂದರು ಸಹೋದರ ಸಹೋದರಿಯರೇ... ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದ್ದರು ಎಂದಿದ್ದಾರೆ.
ಸ್ವಾಮಿ ವಿವೇಕಾನಂದರು ನಮ್ಮ ಗುರುತನ್ನು ಮತ್ತಷ್ಟು ದೃಢಪಡಿಸಿದ್ದರು. 83 ರ 9/11 ಸಹೋದರತ್ವದ ಸಂಕೇತವಾಗಿ ವಿವೇಕಾನಂದರು ಕೇವಲ ಮೂರು ಪದಗಳಲ್ಲಿ ಭಾರತದ ಶಕ್ತಿಯನ್ನು ಜಗತ್ತಿಗೆ ತಿಳಿಸಿದ್ದರು ಎಂದು ಮೋದಿ ವಿವೇಕಾನಂದರನ್ನು ಸ್ಮರಿಸಿದ್ದಾರೆ.