ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಈ ಹಿಂದೆ ರೊಹಿಂಗ್ಯಾ ಮುಸ್ಲಿಮರಿಗೆ ಪೌರತ್ವ ನಿರಾಕರಿಸಿದ್ದ ಕೇಂದ್ರ ಸರ್ಕಾರ ಚಕ್ಮಾ ಮತ್ತು ಹಜಾಂಗ್ ನಿರಾಶ್ರಿತರಿಗೆ ನೀಡಲು ಮುಂದಾಗಿದೆ.
ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಅರುಣಾಚಲ ಪ್ರದೇಶದ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿರುವ ಸುಮಾರು 1 ಲಕ್ಷಕ್ಕೂ ಅಧಿಕ ಚಕ್ಮಾ ಹಾಗೂ ಹಜಾಂಗ್ ಸಮುದಾಯದವರಿಗೆ ಭಾರತೀಯ ಪೌರತ್ವ ನೀಡಲು ನೀರ್ಧರಿಸಿದೆ. ಸುಮಾರು 50 ವರ್ಷಗಳ ಹಿಂದೆಯೇ ಹಿಂದಿನ ಪೂರ್ವ ಪಾಕಿಸ್ತಾನದಿಂದ ಭಾರತಕ್ಕೆ ಆಶ್ರಯವನ್ನರಸಿ ಬಂದಿದ್ದ ಚಕ್ಮಾ ಮತ್ತು ಹಜಾಂಗ್ ನಿರಾಶ್ರಿತರಿಗೆ ಪೌರತ್ವ ನೀಡುವಂತೆ 2015ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಈ ಹಿನ್ನಸೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ನಡೆಯಲ್ಲಿದ್ದು, ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಇನ್ನು ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಲಹೆಗಾರ ಅಜಿತ್ ಧೋವಲ್, ಅರುಣಾಚಲ ಪ್ರದೇಶ ಸಿಎಂ ಪೇಮಾ ಖಂಡು, ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಬಹುತೇಕ ಚಕ್ಮಾ ಮತ್ತು ಹಜಾಂಗ್ ನಿರಾಶ್ರಿತರು ಕಳೆದ 5 ದಶಕಗಳಿಂದ ಅರುಣಾಚಲ ಪ್ರದೇಶದಲ್ಲಿ ವಾಸಿಸುತ್ತಿದ್ದು, ಸರ್ಕಾರದ ಯೋಜನೆಗಳನ್ನು ಅನುಭವಿಸುವಲ್ಲಿ ವಿಫಲರಾಗಿದ್ದಾರೆ. ಇದೇ ಕಾರಣಕ್ಕೆ ಈ ಹಿಂದೆ ಸುಪ್ರೀಂ ಕೋರ್ಟ್ ಚಕ್ಮಾ ಮತ್ತು ಹಜಾಂಗ್ ನಿರಾಶ್ರಿತರಿಗೆ ಪೌರತ್ವ ನೀಡುವಂತೆ ಆದೇಶ ನೀಡಿತ್ತು.
ಸುಪ್ರೀಂ ಆದೇಶದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಆದಷ್ಟು ಬೇಗ ಚಕ್ಮಾ ಮತ್ತು ಹಜಾಂಗ್ ನಿರಾಶ್ರಿತರಿಗೆ ಪೌರತ್ವ ನೀಡುವ ಸಾಧ್ಯತೆ ಇದೆ.
ಚಕ್ಮಾ ಮತ್ತು ಹಜಾಂಗ್ ನಿರಾಶ್ರಿತರಿಗೆ ಮೋದಿ ಬರ್ತ್ ಡೇ ಗಿಫ್ಟ್
ಇನ್ನು ಇದೇ ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಿದ್ದು, ಅಂದು ಭಾರತೀಯ ಪ್ರಜೆಗಳಿಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಅಂದೇ ಚಕ್ಮಾ ಮತ್ತು ಹಜಾಂಗ್ ನಿರಾಶ್ರಿತರಿಗೂ ಪ್ರಧಾನಿ ಮೋದಿ ಬರ್ತ್ ಡೇ ಗಿಫ್ಟ್ ಆಗಿ ಪೌರತ್ವ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
1960ರ ವರೆಗೂ ಚಿತ್ತಗಾಂಗ್ ನ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿದ್ದ ಚಕ್ಮಾ ಮತ್ತು ಹಜಾಂಗ್ ನಿರಾಶ್ರಿತರು, 1960ರಲ್ಲಿ ಕಪ್ಟಾಯ್ ಅಣೆಕಟ್ಟು ನಿರ್ಮಿಸುವ ಸಲುವಾಗಿ ಅವರ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಚಕ್ಮಾ ಮತ್ತು ಹಜಾಂಗ್ ನಿರಾಶ್ರಿತರು ಅರುಣಾಚಲ ಪ್ರದೇಶಕ್ಕೆ ವಲಸೆ ಬಂದಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos