ಬಿಸಿಯೂಟ ಸೇವಿಸುತ್ತಿರುವ ವಿದ್ಯಾರ್ಥಿಗಳು
ಭುವನೇಶ್ವರ: ಒಡಿಶಾದ ಮಲ್ಕಾಂಗರಿ ಜಿಲ್ಲೆಯ 50 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿ ಊಟ ಸೇವಿಸಿದ ಬಳಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಬಡಾಪಾದ ಎಜುಕೇಷನ್ ಸೆಂಟರ್ ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಒಡಿಶಾ ಸರ್ಕಾರದ ಪ.ಜಾತಿ ಮತ್ತು ಪ.ಪಂಗಡ ಅಭಿವೃದ್ಧಿ ಇಲಾಖೆಯು ನಡೆಸುವ ವಸತಿ ಶಾಲೆ ಇದಾಗಿದೆ. ಶಾಲೆಯಲ್ಲಿ 1 ರಿಂದ 8ನೇ ತರಗತಿಯಲ್ಲಿ 250 ವಿದ್ಯಾರ್ಥಿಗಳು ಅಭ್ಯಾಸದಲ್ಲಿ ತೊಡಗಿದ್ದಾರೆ.
ಊಟದ ನಂತರ ವಿದ್ಯಾರ್ಥಿಗಳು ಹೊಟ್ಟೆ ನೋವು, ವಾಂತಿ ಆಗಿರುವುದಾಗಿ ದೂರು ನೀಡಿದಾಗ ಅವರನ್ನು ಜನ್ಬಾಯಿ ಔಷಧಾಲಯಕ್ಕೆ ಕರೆದೊಯ್ಯಲಾಯಿತು. ಬಳಿಕ ಅವರನ್ನು ಚಿತ್ರಕೊಂಡದ ಬಾಲಿಮೇಲಾ ಆಣೆಕಟ್ಟು ಪ್ರಾಜೆಕ್ಟ್ ನ ಆಸ್ಪತ್ರೆಗೆ ಸೇರಿಸಲಾಯಿತು.
ಬೆಳಗಿನ ಉಪಾಹಾರಕ್ಕಾಗಿ ವಿದ್ಯಾರ್ಥಿಗಳು ಅನ್ನ ಮತ್ತು ಸಕ್ಕರೆಯನ್ನು ಕಲಸಿ ತಿನ್ನುತ್ತಿದ್ದರು. ಹೀಗೆ ಕಲಸಿದ ಅನ್ನ ನೆಲದ ಮೇಲೆ ಬಿದ್ದಿದ್ದು ಅದು ಫಿನಾಯಿಲ್ ನ ಸಂಪರ್ಕಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿದೆ.
ಉಪಹಾರದ ನಂತರ, ಚಿಕ್ಕ ಮಕ್ಕಳಲ್ಲಿ 50 ಮಂದಿ ಹೊಟ್ಟೆ ನೋವು ಮತ್ತು ವಾಂತಿ ಮಾದಲು ಪ್ರಾರಂಭಿಸಿದರು ಆದರೆ ಹಿರಿಯ ವಿದ್ಯಾರ್ಥಿಗಳು ಎಂದಿನಂತೆ ಇದ್ದರು. ಚಿತ್ರಕೊಂಡ ಆಸ್ಪತ್ರೆಗೆ ಬಿಎಸ್ ಎಫ್ ಆಂಬ್ಯುಲೆನ್ಸ್ ನಲ್ಲಿ ತೆರಳುವುದಕ್ಕೂ ಮುನ್ನ ಅವರನ್ನು ಹತ್ತಿರದ ಔಷಧಿ ಮಳಿಗೆಗೆ ಕರೆದೊಯ್ಯಲಾಗಿತ್ತು. ಸದ್ಯ ವಿದ್ಯಾರ್ಥಿಗಳ ಆರೋಗ್ಯ ಸ್ಥಿರ ವಾಗಿದೆ ಎಂದು ಹೇಳಲಾಗಿದೆ.
ಕಳೆದ 24 ಗಂಟೆಗಳಲ್ಲಿ ಒಡಿಶಾದಲ್ಲಿ ಮಧ್ಯಾಹ್ನದ ಊಟದ ಕಾರಣ ಅನಾರೋಗ್ಯಕ್ಕೆ ಈಡಾದ ಮೂರನೇ ಘಟನೆ ಇದಾಗಿದೆ. ಗುರುವಾರ, ಕಾಲಾಹಂಡಿ ಎನ್ನುವಲ್ಲಿ ಮಧ್ಯಾಹ್ನದ ಊಟದ ನಂತರ 80 ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗಿದ್ದರು. ಇದೇ ರೀತಿಯ ದುರ್ಘಟನೆ ಗಜಪತಿಯ ಗುಮ್ಮ ಬ್ಲಾಕ್ ನಲ್ಲಿ ನಡೆದಿದ್ದು ಅಲ್ಲಿ 40 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇತ್ತೀಚಿನ ಮಾಹಿತಿಯಂತೆ ಒಡಿಶಾದ ಮಲ್ಕಾಂಗರಿ ಮತ್ತು ಕಾಳಹಂಡಿ ಜಿಲ್ಲೆಗಳಲ್ಲಿನ ವಿವಿಧ ಶಾಲೆಗಳಲ್ಲಿ ಬಿಸಿಯೂಟ ಸೇವಿಸಿದ ಬಳಿಕ ಸುಮಾರು 150 ವಿದ್ಯಾರ್ಥಿನಿಯರು ಸೇರಿದಂತೆ 230 ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos