ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್ ಬಳಿ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನದ ವಿರುದ್ದ ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಅವರು ಭಾನುವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ಅರ್ನಿಯಾ ಸೆಕ್ಟರ್ ಬಳಿ ಪಾಕಿಸ್ತಾನೆ ಸೇನೆ ನಡೆಸಿರುವ ಅಪ್ರಚೋದಿತ ಗುಂಡಿನ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವಅವರು, ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘಿಸಿದ್ದೇ ಆದರೆ, ತಕ್ಕ ಪ್ರತಿಕ್ರಿಯೆಯನ್ನು ಭಾರತೀಯ ಸೇನೆ ನೀಡಲಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ನಮ್ಮ ಮೇಲೆ ಗುಂಡು ಹಾರಿಸಿದರೆ, ನಮ್ಮ ಬಂದೂಕುಗಳೇನು ಸುಮ್ಮನಿರುವುದಿಲ್ಲ, ಪ್ರತಿಯಾಗಿ ನಾವೂ ಮತ್ತಷ್ಟು ಬಲ ಹಾಗೂ ಕೈಗಳೊಂದಿಗೆ ದಿಟ್ಟ ಉತ್ತರವನ್ನು ನೀಡುತ್ತೇವೆ. ಈ ಹಿಂದೆ ಕೂಡ ಪಾಕಿಸ್ತಾನ ಇದೇ ರೀತಿಯ ದುರ್ವರ್ತನೆ ತೋರಿ ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಪಾಕಿಸ್ತಾನ ಮೊದಲು ತನ್ನ ದುರ್ವರ್ತನೆಯನ್ನು ನಿಲ್ಲಿಸಬೇಕಿದೆ ಎಂದು ತಿಳಿಸಿದ್ದಾರೆ.
ಕದನ ವಿರಾಮ ಉಲ್ಲಂಘನೆ ಪಾಕಿಸ್ತಾನದ ಹತಾಶ ಭಾವವನ್ನು ತೋರಿಸುತ್ತದೆ. ವಿಶ್ವ ಸಮುದಾಯದಿಂದ ಪ್ರತ್ಯೇಕಗೊಳ್ಳುತ್ತಿರುವುದರಿಂತ ಪಾಕಿಸ್ತಾನ ಹತಾಶಗೊಂಡಿದೆ. ಪ್ರಮುಖವಾಗಿ ಚೀನಾದಲ್ಲಿ ನಡೆದ ಬ್ರಿಕ್ಸ್ ಸಮಾವೇಶದಲ್ಲಿ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳನ್ನು ಹೆಸರಿದ ಬಳಿಕವಂತೂ ಪಾಕಿಸ್ತಾನ ಮತ್ತಷ್ಟು ಹತಾಶಗೊಂಡಿದೆ. ವಿಶ್ವ ಸಮುದಾಯದಿಂದ ಪಾಕಿಸ್ತಾನ ಪ್ರತ್ಯೇಕಗೊಳ್ಳುತ್ತಿದೆ. ಆಪ್ತ ಸ್ನೇಹ ದೇಶವಾಗಿರುವ ಚೀನಾ ಕೂಡ ಪಾಕಿಸ್ತಾನವನ್ನು ಇಂದು ಬೆಂಬಲಿಸುತ್ತಿಲ್ಲ. ಮುಸ್ಲಿಂ ರಾಷ್ಟ್ರಗಳೂ ಕೂಡ ಪಾಕಿಸ್ತಾನದಿಂದ ಪ್ರತ್ಯೇಕಗೊಳ್ಳುತ್ತಿವೆ.
ಪ್ರಸ್ತುತ ಗಡಿಯಲ್ಲಿ ಗುಂಡಿನ ಚಕಮಕಿ ಸ್ಥಗಿತಗೊಂಡಿದ್ದು, ರಕ್ಷಣಾ ಕಾರ್ಯಾಚರಣೆಗಳು ಪ್ರಗತಿಯಲ್ಲಿದೆ. ಐಜಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆಂದಿದ್ದಾರೆ.
ಕಳೆದ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಪಾಕಿಸ್ತಾನ ಸೇನೆ ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಗೆ ಗಡಿಯಲ್ಲಿ 6 ನಾಗರೀಕರು ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಓರ್ವ ನಾಗರೀಕ ಸಾವನ್ನಪ್ಪಿದ್ದಾನೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos