ವಿಜಯವಾಡ: ಪೊಲೀಸರ ಎಚ್ಚರಿಕೆ ಸಂದೇಶಗಳಿಗೆ ಕಿವಿಗೊಡದೆ ಆನ್ ಲೈನ್ ನಲ್ಲಿ ಸ್ನೇಹ ಮಾಡಲು ಹೋಗಿ ವೈದ್ಯರೊಬ್ಬರು 4.88 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ವಿಜಯವಾಡದಲ್ಲಿ ನಡೆದಿದೆ. ಅಪರಿಚಿತನ ಸ್ನೇಹ ವೈದ್ಯರಿಗೆ ಕೇವಲ ಮೂರು ವಾರಗಳ ಹಿಂದೆಯಷ್ಟೇ ಆಗಿತ್ತು.
ಇದಕ್ಕೂ ಮುನ್ನ ಶಿಕ್ಷಕಿಯೊಬ್ಬರು ಆನ್ ಲೈನ್ ಸ್ನೇಹದಿಂದ 8.52 ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಪಟಮಾಟ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಐಟಿ ಕಾಯ್ದೆ 66(ಬಿ)ಯಡಿ ಸೆಕ್ಷನ್ 415, 420ರಡಿಯಲ್ಲಿ ಕೇಸು ದಾಖಲಾಗಿದ್ದು ತನಿಖೆ ಸದ್ಯದಲ್ಲಿಯೇ ನಡೆಯಲಿದೆ.
ಕಳೆದ ಮೂರು ವರ್ಷಗಳಿಂದ ಸರ್ಜನ್ ಆಗಿ ಕೆಲಸ ಮಾಡುತ್ತಿರುವ ವೈದ್ಯರು ಅಯ್ಯಪ್ಪ ನಗರ ನಿವಾಸಿ. ಅವರಿಗೆ ವೆರೊನಿಕಾ ಆಡಮ್ಸ್ ಎಂಬ ಮಹಿಳೆಯಿಂದ ಆನ್ ಲೈ ನ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಆಕೆ ಲಂಡನ್ ನಲ್ಲಿ ಉದ್ಯಮಿ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದಾಳೆ. ಶನಿವಾರ ಭಾರತಕ್ಕೆ ಸಭೆಯೊಂದರಲ್ಲಿ ಭಾಗವಹಿಸಲು ಬರುವುದಾಗಿ ಹೇಳಿದ್ದಳು. ಅಲ್ಲದೆ ವಿಜಯವಾಡಕ್ಕೆ ಬಂದು ವೈದ್ಯರನ್ನು ಭೇಟಿ ಮಾಡಲು ಆಸಕ್ತಿ ತೋರಿದ್ದಳು.
ಎರಡು ದಿನಗಳು ಕಳೆದ ನಂತರ ವೆರೊನಿಕಾ ವೈದ್ಯರಿಗೆ ಫೇಸ್ ಬುಕ್ ನಲ್ಲಿ ಸಂದೇಶ ಕಳುಹಿಸಿ ತಾನು ದೆಹಲಿ ವಿಮಾನ ನಿಲ್ದಾಣದಲ್ಲಿದ್ದು ಸುಂಕ ಅಧಿಕಾರಿಗಳ ಬಂಧನದಲ್ಲಿದ್ದೇನೆ ಎಂದಿದ್ದಳು. ತನ್ನ ಬಳಿಯಿರುವ ಎಲ್ಲಾ ಹಣವನ್ನು ಕಸ್ಟಮ್ಸ್ ಅಧಿಕಾರಿಗಳು ತೆಗೆದುಕೊಂಡಿರುವುದರಿಂದ ಹಣದ ಅವಶ್ಯಕತೆಯಿದ್ದು, ತಕ್ಷಣವೇ ಹಣ ಕಳುಹಿಸುವಂತೆ ಕೋರಿದ್ದಳು. ಮತ್ತೊಬ್ಬರು ಕಸ್ಟಮ್ಸ್ ಅಧಿಕಾರಿಯೆಂದು ಹೇಳಿಕೊಂಡು ವೈದ್ಯರ ಬಳಿ ಫೋನ್ ನಲ್ಲಿ ಮಾತನಾಡಿ ವೆರೊನಿಕಾ ಹೆಸರಿನಲ್ಲಿ 5 ಲಕ್ಷ ರೂಪಾಯಿ ಬ್ಯಾಂಕಿಗೆ ಠೇವಣಿಯಿಡುವಂತೆ ಹೇಳಿದ್ದರು.
ಗಾಬರಿಗೊಂಡ ವೈದ್ಯರು ತಕ್ಷಣವೇ ವೆರೊನಿಕಾ ಹೆಸರಿನಲ್ಲಿ 4.88 ಲಕ್ಷ ರೂಪಾಯಿ ಠೇವಣಿಯಿರಿಸಿದ್ದಾರೆ. ತಮ್ಮ ಬಳಿಯಿದ್ದ ಹಣವನ್ನೆಲ್ಲಾ ಠೇವಣಿಯಿಟ್ಟು ಆ ಸಂಖ್ಯೆಗೆ ವೈದ್ಯರು ಕರೆ ಮಾಡಿದರೆ ಸ್ವಿಚ್ ಆಫ್ ಬಂತು. ಆಗ ಅವರಿಗೆ ತಾವು ಮೋಸ ಹೋಗಿರುವುದು ಗೊತ್ತಾಯಿತು ಎಂದು ಪೊಲೀಸರು ಹೇಳುತ್ತಾರೆ.
ಸೈಬರ್ ಅಪರಾಧ ವಿಭಾಗ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.