ಚೆನ್ನೈ: ಮದ್ರಾಸ್ ಹೈಕೋರ್ಟ್ ತಮಿಳುನಾಡು ವಿಧಾನಸಭೆ ಬಹುಮತ ಸಾಬೀತಿಗೆ ತಡೆ ಆದೇಶವನ್ನು ವಿಸ್ತರಣೆ ಮಾಡಿದ್ದು ಇದೇ ವೇಳೆ 18 ಎಐಎಡಿಎಂಕೆ ಶಾಸಕರ ಅಮಾನತು ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಿದ್ದು ಟಿಟಿವಿ ದಿನಕರನ್ ಬಳಗಕ್ಕೆ ತೀವ್ರ ಹಿನ್ನೆಡೆಯಾಗಿದೆ.
ಮುಂದಿನ ಆದೇಶದವರೆಗೆ ತಮಿಳುನಾಡಿನಲ್ಲಿ ವಿಶ್ವಾಸಮತ ಯಾಚನೆ ನಡೆಸುವಂತಿಲ್ಲ ಎಂದು ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾರೆ.
ತಮಿಳುನಾಡು ರಾಜಕೀಯ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಪಳನಿ ಸ್ವಾಮಿ ಸರ್ಕಾರದ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ಹಾಗೂ ಕಲಾಪಕ್ಕೆ ಅಡ್ಡಿ ಪಡಿಸುವ ಬೆದರಿಕೆಯೊಡ್ಡುತ್ತಿದ್ದ ಟಿಟಿವಿ ದಿನಕರನ್ ಬೆಂಬಲಿತ 18 ಮಂದಿ ಶಾಸಕರನ್ನು ತಮಿಳುನಾಡು ವಿಧಾನಸಭೆ ಸ್ಪೀಕರ್ ಧನಪಾಲ್ ಅವರು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.
ಈ ಆದೇಶವನ್ನು ಪ್ರಶ್ನಿಸಿ ಎಐಎಡಿಎಂಕೆಯ 8 ಶಾಸಕರಾದ ಪಿ ವೆಟ್ರಿವೇಲ್, ಎನ್ ಜಿ ಪಾರ್ಥಿಬನ್, ಪಿ ಪಳನಿಯಪ್ಪನ್, ಜಯಂತಿ ಪದ್ಮನಾಭನ್, ಸೇಂತಿಲ್ ಬಾಲಾಜಿ, ಆರ್ ಮುರುಗನ್, ಆರ್ ಬಾಲಸುಬ್ರಹ್ಮಣಿ ಮತ್ತು ಎಸ್ ಮುತ್ತೈಯ ಎಂಬುವರು ಮದ್ರಾಸ್ ಹೈಕೋರ್ಟ್ ನ ಮೊರೆ ಹೋಗಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ದುರೈಸ್ವಾಮಿ ಅವರು ಅಕ್ಟೋಬರ್ 4ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಸ್ಪೀಕರ್ ಧನಪಾಲ್ ಅವರು 1986ರ ತಮಿಳುನಾಡು ವಿಧಾನಸಭೆ ಪಕ್ಷಪಾತ ಕಾನೂನಿನ ಅಡಿಯಲ್ಲಿ ಟಿಟಿವಿ ದಿನಕರನ್ ಬೆಂಬಲಿತ ಶಾಸಕರಾದ ತಂಗ ತಮಿಳ್ ಸೆಲ್ವನ್, ಸೆಂಥಿಲ್ ಬಾಲಾಜಿ, ಪಿ ವೆಟ್ರಿವೇಲ್ ಮತ್ತು ಕೆ ಮರಿಯಪ್ಪನ್ ಸೇರಿದಂತೆ ಒಟ್ಟು 18 ಮಂದಿ ಶಾಸಕರನ್ನು ಅನರ್ಹಗೊಳಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos